ಸಮಯ ನಿಧಾನವಾಗಿ ನಡೆದುಹೋಯಿತು ಆದರೆ ಬದುಕು ಮಾತ್ರ ಓಡಿಹೋಯಿತು. ನಿನ್ನೆ ಶುರುವಾದಂತೆ ಕಂಡ ಜೀವನ, ಇಂದು ಸಂಜೆಯ ನೆರಳಲ್ಲಿ ನಿಂತಿದೆ. ಆದರೆ ಈ ಪಯಣ ಯಾವಾಗ ಇಷ್ಟೊಂದು ದೂರ ಸಾಗಿತೋ ತಿಳಿಯಲೇ ಇಲ್ಲ…!
ಬಾಲ್ಯದ ಕನಸುಗಳನ್ನು ಕೈಯಲ್ಲಿ ಹಿಡಿದು, “ಏನಾದರೂ ಸಾಧಿಸಬೇಕು” ಎಂಬ ಹಠದಲ್ಲಿ ಜೀವನದ ಹಿಂದೆ ಓಡಿದ ನಾವು, ನಮ್ಮ ನಗು, ನೆಮ್ಮದಿ, ಯೌವನ ಯಾವಾಗ ದಾರಿಯಲ್ಲೇ ಉಳಿದುಹೋಯಿತೋ ತಿಳಿಯಲೇ ಇಲ್ಲ…!
ಸಂಸಾರವೆಂಬ ಸಾಗರದಲ್ಲಿ
ಹೊಣೆಗಾರಿಕೆಗಳ ಅಲೆಗಳನ್ನು ಎದುರಿಸುತ್ತಾ, ನಮ್ಮ ಆಸೆಗಳನ್ನು ತ್ಯಾಗ ಮಾಡಿ ಇತರರ ಕನಸುಗಳನ್ನು ಸಾಕಾರಗೊಳಿಸುತ್ತಾ, ನಮ್ಮ ಜೀವನವೇ ಯಾವಾಗ ಕಳೆದುಹೋಯಿತೋ
ತಿಳಿಯಲೇ ಇಲ್ಲ…!
ಭುಜದ ಮೇಲೆ ಆಟವಾಡುತ್ತಿದ್ದ ಮಕ್ಕಳು, ಇಂದು ನಮ್ಮ ಕಣ್ಣೆದುರೇ ದೊಡ್ಡವರಾಗಿ ತಮ್ಮದೇ ಪ್ರಪಂಚ ಕಟ್ಟಿಕೊಂಡಿದ್ದಾರೆ. ನಿನ್ನೆವರೆಗೂ ನಮ್ಮ ಕೈ ಹಿಡಿದವರು, ಇಂದು ಯಾವಾಗ ದೂರ ನಡೆದರೋ ತಿಳಿಯಲೇ ಇಲ್ಲ…!
ಒಮ್ಮೆ ಬಾಡಿಗೆ ಮನೆಯ ಸಣ್ಣ ಕೊಠಡಿಯಲ್ಲಿ ಒಟ್ಟಾಗಿ ನಕ್ಕ ದಿನಗಳು, ಇಂದು ದೊಡ್ಡ ಮನೆಯಲ್ಲಿದ್ದರೂ ಆ ಹಳೆಯ ನಗು, ಆ ಒಡನಾಟ ಯಾವಾಗ ಕಾಣೆಯಾಗಿತೋ ತಿಳಿಯಲೇ ಇಲ್ಲ…!
ಬೆವರಲ್ಲಿ ನೆನೆದು ಸೈಕಲ್ ತುಳಿದ ಕಾಲದಲ್ಲಿ ಸಂತೋಷ ಹೆಚ್ಚು ಇತ್ತು ಇಂದು ಕಾರು ಇದೆ, ಸೌಕರ್ಯ ಇದೆ ಆದರೆ ನೆಮ್ಮದಿ ಎಲ್ಲೋ ಕಳೆದುಹೋಗಿದೆ. ಯಾವಾಗ ಕಳೆದುಹೋಯಿತೋ ತಿಳಿಯಲೇ ಇಲ್ಲ…!
ಒಮ್ಮೆ ಹಾಸಿಗೆ ತಾಗುತ್ತಿದ್ದಂತೆಯೇ ನಿದ್ರೆ ಕಣ್ಣಿಗೆ ಬರುತ್ತಿತ್ತು. ಇಂದು ಸಾವಿರ ಚಿಂತೆಗಳ ನಡುವೆ ರಾತ್ರಿ ಕಳೆಯುತ್ತದೆ ಆದರೆ ಮನಸ್ಸು ಯಾವಾಗ ಇಷ್ಟು ದಣಿದಿತೋ ತಿಳಿಯಲೇ ಇಲ್ಲ…!
ದಟ್ಟ ಕಪ್ಪು ಕೂದಲಿನ ಮಧ್ಯೆ ಕನಸುಗಳನ್ನು ಕಟ್ಟುತ್ತಿದ್ದ ನಾವು, ಇಂದು ಬೆಳ್ಳಿಕೂದಲಿನ ನಡುವೆ ನೆನಪುಗಳನ್ನು ಎಣಿಸುತ್ತಿದ್ದೇವೆ. ಯೌವನ ಯಾವಾಗ ವಿದಾಯ ಹೇಳಿತೋ ತಿಳಿಯಲೇ ಇಲ್ಲ…!
ಜೀವನವೆಲ್ಲ ಮಕ್ಕಳಿಗಾಗಿ, ಕುಟುಂಬಕ್ಕಾಗಿ ಎಂದು ನಮ್ಮ ಆರೋಗ್ಯ, ಸಂತೋಷ, ಆಸೆ ಎಲ್ಲವನ್ನೂ ಮರೆತ ನಾವು, ಇಂದು ಕನ್ನಡಿಯ ಮುಂದೆ ನಿಂತಾಗ ನಮ್ಮನ್ನೇ ನಾವು ಕೇಳಿಕೊಳ್ಳುವಂತಾಗಿದೆ. ನಮಗಾಗಿ ನಾವು ಬದುಕಿದ್ದು ಯಾವಾಗ..?
ಹಣ ಸಂಪಾದಿಸಿದೆವು…,
ಮನೆ ಕಟ್ಟಿದೆವು…,
ಗೌರವ ಗಳಿಸಿದೆವು…,
ಆದರೆ ಸಮಯ ಕಳೆದುಹೋಯಿತು…,
ಆರೋಗ್ಯ ಕೈತಪ್ಪಿತು…,
ಒಡನಾಟ ದೂರವಾಯಿತು…,
ಕೊನೆಗೆ ಜೀವನ ಕಲಿಸಿದ ಕಠಿಣ ಸತ್ಯ ಒಂದೇ ಬದುಕು ಅಂದ್ರೆ ಕೇವಲ ಬದುಕುವುದಲ್ಲ, ನಮ್ಮವರ ಜೊತೆ ಬದುಕುವುದೂ ಹೌದು… ಸಂಪಾದನೆ ಮುಖ್ಯ ಆದರೆ ಸಂತೋಷವನ್ನು ಉಳಿಸಿಕೊಳ್ಳುವುದು ಇನ್ನೂ ಮುಖ್ಯ…!
ಇಂದು ಹಿಂದಿರುಗಿ ನೋಡಿದಾಗ ಮನಸ್ಸು ಮೌನವಾಗಿ ಕೇಳುತ್ತದೆ ಇಷ್ಟೊಂದು ವರ್ಷ ಬದುಕಿಬಿಟ್ಟೆವು ಆದರೆ ಬದುಕನ್ನೇ ಯಾವಾಗ ಕಳೆದುಕೊಂಡೆವು…? ಕಾಲ ಕದ್ದದ್ದು ಬಹಳಷ್ಟು ಆದರೆ ಅದು ಯಾವಾಗ ಕದ್ದಿತೋ ತಿಳಿಯಲೇ ಇಲ್ಲ…!
~ರಾಘವೇಂದ್ರ ಜೆ(ಶಿಂಧೆ)
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು
ಬೆಂಗಳೂರು
