ಬೀಳಗಿ - ಪತ್ರಿಕೆಗಳು ಉದ್ಯಮಗಳಾಗದೇ,ಸತ್ಯ ಸುದ್ದಿಯ ನಿಜವಾದ ಅಸ್ತ್ರಗಳಾಗಿ ಬೆಳೆಯಬೇಕು,ಪತ್ರಿಕಾ ವರದಿಗಾರರು ಯಾವುದೇ ಬ್ಲ್ಯಾಕ್ಮೇಲ್ ತಂತ್ರಗಳಿಗೆ ಒಳಗಾಗದೆ, ಅತ್ಯಂತ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಸೇವೆ ಸಲ್ಲಿಸಬೇಕು ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು ಹಾಗೂ ಶಾಸಕರಾದ ಜೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಕೊತಿ೯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಿಕರ್ತರ ಸಂಘದ ಬೀಳಗಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ -೨೦೨೬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನಬದ್ಧವಾಗಿ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗಗಳಂತೆ ಪತ್ರಿಕಾರಂಗವೂ ಇಂದು ಸಮಾಜದಲ್ಲಿ 4ನೇ ಅಂಗವಾಗಿ ಬೆಳೆದು ನಿಂತಿರುವುದು ಸಂತಸದ ಸಂಗತಿ.ಆದರೆ ಪತ್ರಿಕೆಗಳಿಗೆ ಸವಾಲಾಗಿ ಸಾಮಾಜಿಕ ಜಾಲತಾಣ ಬಂದಿದೆ ಆದರು ಇನ್ನು ಪತ್ರಿಕೆಗಳನ್ನು ಓದುವ ಅಭ್ಯಾಸ ಜನರಲ್ಲಿ ಇದೆ, ಅದಕ್ಕಾಗಿ ಜನರು ವಿಶ್ವಾಸ ಗಳಿಸುವಂತೆ ಪತ್ರಿಕೆಗಳು ಬೆಳೆಯಬೇಕು ಎಂದ ಅವರು ತಾಲೂಕು ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ ಪತ್ರಕರ್ತರು ಜಾಗ ಕಾಯ್ದಿರಿಸಿದರೆ, ಶಾಸಕರ ನಿಧಿ ಅಥವಾ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ 20 ಲಕ್ಷ ರೂಪಾಯಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಿಂಟ್ ಮೀಡಿಯಾಗಳಲ್ಲಿ ಬರುವ ಸುದ್ದಿಗಳು,ಗೌರವಯುತ ಸುದ್ದಿಗಳೊಂದಿಗೆ ಇರಬೇಕು. ಎಸ್.ಎಸ್.ಎಲ್.ಸಿ, ಐಎಎಸ್, ಕೆಎಎಸ್ ಹಾಗೂ ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬೀಳಗಿ ಕ್ಷೇತ್ರದ ಕಲಾದಗಿಯಲ್ಲಿ 1864 ರ ಇಸ್ವಿ ಹಿಂದೆಯೇ ಗೋವಿಂದರಾವ್ ಅಭ್ಯಂಕರ್ ಅವರು 'ರತ್ನಾಕರ' ಮತ್ತು 'ಹಿತೇಚು' ಎಂಬ ಪತ್ರಿಕೆಗಳನ್ನು ಪ್ರಾರಂಭಿಸುವ ಮೂಲಕ ಪತ್ರಿಕಾರಂಗಕ್ಕೆ ಮುನ್ನುಡಿ ಬರೆದಿದ್ದ ಇತಿಹಾಸವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಚ್.ಆರ್. ನಿರಾಣಿ ಅವರು ಭಾಗವಹಿಸಿ ಮಾತನಾಡಿದರು. ಪತ್ರಿಕಾರಂಗವು ಸಂವಿಧಾನದ ಅತ್ಯಂತ ಪ್ರಮುಖ ಹಾಗೂ ನಾಲ್ಕನೇ ಅಂಗವಾಗಿದ್ದು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಷ್ಟೇ ಗೌರವ ಹಾಗೂ ಸ್ಥಾನಮಾನವನ್ನು ಪಡೆದುಕೊಂಡಿದೆ. ಇಡೀ ರಾತ್ರಿ ಶ್ರಮವಹಿಸಿ ಸಾರ್ವಜನಿಕರ ಮನೆಬಾಗಿಲಿಗೆ ಸುದ್ದಿಯನ್ನು ತಲುಪಿಸುವ ಪತ್ರಕರ್ತರ ಮತ್ತು ವಿತರಕರ ಕಾರ್ಯ ಶ್ಲಾಘನೀಯ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸರಕಾರ ಮತ್ತು ಜನಸಾಮಾನ್ಯರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮಗಳ ಕೊಡುಗೆ ಅಪಾರ ಎಂದು ಅವರು ಬಣ್ಣಿಸಿದರು.
ಇದೇ ವೇಳೆ, ಬೀಳಗಿ ಭಾಗಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಮಾಜಿ ಸಚಿವರು ಹಾಗೂ ಎಸ್.ಆರ್. ಪಾಟೀಲ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ಎಸ್.ಆರ್. ಪಾಟೀಲ್ ಅವರ ಕಾರ್ಯವನ್ನು ಎಚ್.ಆರ್. ನಿರಾಣಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಈ ಭಾಗದ ವಿದ್ಯಾರ್ಥಿಗಳಿಗೆ ಕಾನೂನು ಪದವಿ (ಲಾ ಕಾಲೇಜು) ಕಲಿಯಲು ಬೀಳಗಿಯಲ್ಲೇ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ಎಸ್.ಆರ್. ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಬೀಳಗಿ ತಾಲೂಕಿನ ವರದಿಗಾರರು ಅತ್ಯಂತ ವಸ್ತುನಿಷ್ಠ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕಾರಂಗ ಮತ್ತಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಮತ್ತು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪತ್ರಿಕೋದ್ಯಮದ ಪಾತ್ರ ಅತ್ಯಂತ ಹಿರಿದಾದುದು. ಯಾವುದೇ ಭಯ, ಭೀತಿ ಅಥವಾ ಮುಲಾಜಿಗೆ ಒಳಗಾಗದೆ ಸತ್ಯವನ್ನು ಸತ್ಯವೆಂದು ಸಮಾಜದ ಮುಂದೆ ಇಡುವುದೇ ಪವಿತ್ರವಾದ ಪತ್ರಿಕೋದ್ಯಮ ಧರ್ಮ.
ಬೀಳಗಿ ತಾಲೂಕಿನ ಪತ್ರಕರ್ತರು ಬ್ಲ್ಯಾಕ್ಮೇಲಿಂಗ್ ಪ್ರವೃತ್ತಿಯಿಂದ ದೂರವಿದ್ದು, ಅತ್ಯಂತ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ರಾಜ್ಯಕ್ಕೆ ಬೀಳಗಿಯ ಪತ್ರಿಕೋದ್ಯಮ ಮಾದರಿಯಾಗಿದೆ ಎಂದು ಎಸ್.ಆರ್. ಪಾಟೀಲ್ ಅಭಿನಂದಿಸಿದರು. ಪತ್ರಕರ್ತರು ಕೇವಲ ವರದಿಗಾರಿಕೆಗೆಷ್ಟೇ ಸೀಮಿತವಾಗದೆ, ಸಾರ್ವಜನಿಕ ಬದುಕಿನಲ್ಲಿನ ಕುಂದುಕೊರತೆಗಳು, ನೋವು-ನಲಿವುಗಳನ್ನು ಬೆಳಕಿಗೆ ತಂದು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಪತ್ರಿಕೋದ್ಯಮವು ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ರಾಜಕೀಯ ಪಕ್ಷದ ತುತ್ತೂರಿಯಾಗಬಾರದು ಎಂದ ಅವರು ಬೀಳಗಿ ಭಾಗದಲ್ಲಿ ಈಗಾಗಲೇ ಕಾನೂನು ಹಾಗೂ ತೋಟಗಾರಿಕೆ ಮಹಾವಿದ್ಯಾಲಯಗಳು ಮಂಜೂರಾಗಿದ್ದು, ಶೀಘ್ರದಲ್ಲೇ ಬಿ.ಎಸ್ಸಿ ಕೃಷಿ (B.Sc Agri) ಹಾಗೂ ಬಿ.ಪಿ.ಟಿ (Physiotherapy) ಕೋರ್ಸ್ಗಳು ಆರಂಭಗೊಳ್ಳಲಿವೆ ಎಂದು ಮಾಜಿ ಸಚಿವರು ಹಾಗೂ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಶ್ರೀ ಎಸ್. ಆರ್. ಪಾಟೀಲ್ ಅವರು ಹೇಳಿದರು.
ಉತ್ತರ ಕರ್ನಾಟಕ ಹಾಗೂ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಬರಗಾಲದ ಭೀತಿ ಎದುರಾಗಿದೆ. ರೈತರು, ಸಾರ್ವಜನಿಕರು ಹಾಗೂ ಜಾನುವಾರುಗಳು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ, ಜುಲೈ 31ರಂದು ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ರದ್ದುಗೊಳಿಸುತ್ತಿರುವುದಾಗಿ ಮಾಜಿ ಸಚಿವರು ಪ್ರಕಟಿಸಿದರು. ಅಭಿಮಾನಿಗಳು ಶುಭಾಶಯ ಕೋರಲು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಲು ಶ್ರಮಿಸಬಾರದು ಎಂದು ವಿನಂತಿಸಿದರು.
ಸಮಾರಂಭದಲ್ಲಿ ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮಹೇಶ್ ಅಂಗಡಿ, ಕಾನಿಪ ರಾಜ್ಯ ಕಾರ್ಯ ಕಾರಣಿಕ ಸದಸ್ಯರಾದ ಈಶ್ವರ ಶೆಟ್ಟರ್, ಪ್ರಧಾನ ಕಾರ್ಯದರ್ಶಿ ಜಗಧೀಶ ಗಾಣಿಗೇರ, ಜಿಲ್ಲಾ ಸದಸ್ಯ ತಿಪ್ಪಣ್ಣ ಚಲವಾದಿ, ತಹಸೀಲ್ದಾರ್ ವಿನೋದ್ ಹತ್ತಳಿ , ಪೊಲೀಸ್ ಅಧಿಕಾರಿ ಹನಮಂತ ಸಣಮನಿ, ಪಿಕೆಪಿಎಸ ಅಧ್ಯಕ್ಷ ಹಣಮಂತಗೌಡ ಪಾಟೀಲ, ಸುಭಾಸ್ ರಾಠೋಡ, ಕಿರಣ್ ಬಾಳಗೋಳ, ಪತ್ರಿಕಾ ವಿತರಕರು ಹಾಗೂ ಗೌರವಾನ್ವಿತ ಪತ್ರಕರ್ತರು ರೈತರು ಸಾರ್ವಜನಿಕರು ವಿದ್ಯಾರ್ಥಿಗಳು ಇದ್ದರು.
