ಬೆಳಗಾವಿ: ದೇಶದ ಗಡಿಯಲ್ಲಿ ಹಗಲಿರುಳು ಸೇವೆ ಸಲ್ಲಿಸುವ ಸೈನಿಕರ ತ್ಯಾಗದಿಂದಲೇ ದೇಶದ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಸಮಾಜವು ನಿರಂತರ ಗೌರವ ನೀಡಬೇಕು ಎಂದು ಪ್ರಗತಿಪರ ರೈತ ಮಹಿಳೆ ಹಾಗೂ ಕೃಷಿ ಉದ್ಯಮಿ ಕವಿತಾ ಮಿಶ್ರಾ ಅವರು ಹೇಳಿದರು.
ನಗರದ ಧರ್ಮನಾಥ ಭವನದಲ್ಲಿ ಮಾಜಿ ಸೈನಿಕರ ಮಹಾ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಲಾದ ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ರೈತರು ಹಾಗೂ ಸೈನಿಕರು ದೇಶದ ನಿಜವಾದ ಯೋಧರಾಗಿದ್ದು, ಅನ್ನದಾತರು ಮತ್ತು ಗಡಿಕಾಯುವ ಯೋಧರಿಗೆ ಸಮಾನ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶಕ್ಕೆ ಅನ್ನ ನೀಡಿದ ರೈತರ ಸೇವೆಯನ್ನು ಸ್ಮರಿಸಿದ ಅವರು, ಮಹಿಳೆಯರು ಸ್ವಾಭಿಮಾನ ಮತ್ತು ಸಂಸ್ಕಾರದೊಂದಿಗೆ ಬದುಕಿದಾಗ ಸಮಾಜ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಹೇಳಿದರು.
ಮಾಜಿ ಸೈನಿಕರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಮಾತನಾಡಿ, ನಿವೃತ್ತ ಸೈನಿಕರಿಗೆ ಸರ್ಕಾರ ಸೂಕ್ತ ಗೌರವ ಹಾಗೂ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸೈನಿಕರ ಸಮಸ್ಯೆಗಳ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರ ಶೀಘ್ರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಸನ್ಮಾನ ಮತ್ತು ಶ್ರದ್ಧಾಂಜಲಿ
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳನ್ನು ಸನ್ಮಾನಿಸಿ 'ಬೆಳಗಾವಿ ಸೈನಿಕ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಶಿಕ್ಷಕರು, ವೈದ್ಯರು ಹಾಗೂ ಪ್ರಗತಿಪರ ರೈತರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಬಳಿಕ ಕಾರ್ಗಿಲ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅಮರ ಜವಾನ್ ಜ್ಯೋತಿಗೆ ಪುಷ್ಪನಮನ ಅರ್ಪಿಸಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಬೃಹತ್ ಬೈಕ್ ರ್ಯಾಲಿ
ಕಾರ್ಯಕ್ರಮದ ಅಂಗವಾಗಿ ಖ್ಯಾತ ಉದ್ಯಮಿ ಈರಣ್ಣ ರೊಟ್ಟಿ ಹಸಿರು ನಿಶಾನೆ ತೋರಿಸುವ ಮೂಲಕ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಗೋವಾವೇಸ್ನ ಬಸವೇಶ್ವರ ವೃತ್ತದಿಂದ ಧರ್ಮನಾಥ ಭವನದವರೆಗೆ ನಡೆದ ರ್ಯಾಲಿಯಲ್ಲಿ ಸಾವಿರಾರು ಮಾಜಿ ಸೈನಿಕರು ಭಾಗವಹಿಸಿ, "ಭಾರತ್ ಮಾತಾ ಕೀ ಜೈ" ಘೋಷಣೆಗಳೊಂದಿಗೆ ದೇಶಭಕ್ತಿ ಮೆರೆದರು.
ಜಿಲ್ಲೆಯ 60ಕ್ಕೂ ಹೆಚ್ಚು ಮಾಜಿ ಸೈನಿಕರ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಂಸದ ಜಗದೀಶ ಶೆಟ್ಟರ್, ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ, ಖ್ಯಾತ ಉದ್ಯಮಿ ಈರಣ್ಣ ರೊಟ್ಟಿ, ಪ್ರಗತಿಪರ ರೈತ ಮಹಿಳೆ ಹಾಗೂ ಕೃಷಿ ಉದ್ಯಮಿ ಕವಿತಾ ಮಿಶ್ರಾ, ಗೌರವಾಧ್ಯಕ್ಷ ರಮೇಶ್ ಚೌಗಲಾ, ಉಪಾಧ್ಯಕ್ಷ ಸಂಗಪ್ಪ ಮೇಟಿ, ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ, ಮಹೇಶ್ ಕಂಬಾರ್, ಸುನೀತಾ ಪಟ್ಟಣಶೆಟ್ಟಿ, ಅನೀತಾ ಮಿರ್ಜಿ, ಪರ್ವೇಜ್ ಹವಾಲ್ದಾರ್, ಡಾ. ಸತೀಶ ಚೌಲಿಗೇರಿ, ಲಕ್ಷ್ಮೀಬಾಯಿ ಬಡಸ, ರಾಮನಗೌಡ ಪಾಟೀಲ್, ಡಾ. ಚಂಪಾ ಕೊಪ್ಪದ, ಡಾ. ಅಮೋಘ ಜಂಬಗಿ, ಅಶೋಕ ಮಜಗಿ, ತಹಶೀಲ್ದಾರ್ ಕಲಗೌಡ ಪಾಟೀಲ್, ಈರಣ್ಣ ದೆಯನ್ನವರ, ನಾಗೇಶ ಯಡಾಳ್, ಬಸವರಾಜ ವಣ್ಣೂರ, ಸುಭಾಷ ಪಾಟೀಲ್, ಪ್ರೇಮ್ ಚೌಗಲಾ, ಸುರೇಶ್ ಲಕ್ಕಣ್ಣವರ, ಮನೋಹರ ಪುಡಕಲಟ್ಟಿ, ಪುಷ್ಪಕ ಹನುಮನ್ನವರ, ನಾಗೇಶ ದಂಡಾಪುರ ಸೇರಿದಂತೆ ಮಾಜಿ ಸೈನಿಕರ ಒಕ್ಕೂಟದ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಂಗಮ್ಮಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿ, ನಾಗಪ್ಪ ಕರವಿನ್ನಕೊಪ್ಪ ವಂದಿಸಿದರು.
