ವಿಜಯನಗರ(ಹೊಸಪೇಟೆ): ಜೂನ್.22 : ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಎಷ್ಟೇ ಆಸ್ತಿ-ಅಂತಸ್ತು, ಹಣ ಸಂಪಾದನೆ ಮಾಡಿದರೂ ವೃದ್ಧಾಪ್ಯದಲ್ಲಿ ಅವನ ಕೈ ಹಿಡಿಯುವುದು ಕೇವಲ ಆತ ಕಾಪಾಡಿಕೊಂಡು ಬಂದ ಉತ್ತಮ ಆರೋಗ್ಯ ಮಾತ್ರ. ಹೀಗಾಗಿ ಪ್ರತಿಯೊಬ್ಬರೂ ಯೋಗವನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಇ ಬಾಲಕೃಷ್ಣ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ನಗರಸಭೆ ಹಾಗೂ ವಿವಿಧ ಪ್ರಮುಖ ಸಂಘ-ಸAಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭವ್ಯ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ
ಈ ಬಾರಿಯ ಯೋಗ ದಿನಾಚರಣೆಯು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಅರ್ಥಪೂರ್ಣ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯಿAದ ಯೋಗ ದಿನಾಚರಣೆ ಆರಂಭವಾಗಿ ಇಂದಿಗೆ ಯಶಸ್ವಿಯಾಗಿ 12 ವರ್ಷಗಳು ಸಂದಿವೆ. ಯೋಗ ಎಂಬುದು ಕೇವಲ ಒಂದು ದಿನದ ಪ್ರದರ್ಶನವಲ್ಲ. ಇದು ನಮ್ಮ ಸನಾತನ ಋಷಿಮುನಿಗಳು ಜಗತ್ತಿಗೆ ನೀಡಿದ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಯೋಗ ಅತ್ಯಂತ ಪ್ರಮುಖ ದಾರಿಯಾಗಿದೆ ಎಂದರು.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟೇ ಕೋಟಿ ಹಣವಿರಲಿ, ಎಷ್ಟೇ ಆಸ್ತಿಪಾಸ್ತಿಗಳಿರಲಿ, ನಿಮ್ಮ ಆರೋಗ್ಯ ಕೈಕೊಟ್ಟರೆ ಆ ಸಂಪತ್ತಿಗೆ ಯಾವುದೇ ಬೆಲೆ ಇರುವುದಿಲ್ಲ. ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆತನ ವೃದ್ಧಾಪ್ಯದ ದಿನಗಳು ಸುಖಕರವಾಗಿ ಕಳೆಯಲು ಸಾಧ್ಯ. ಆರೋಗ್ಯವಂತ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ಆರೋಗ್ಯವಂತ ವ್ಯಕ್ತಿಗಳು ನಿರ್ಮಾಣವಾಗಬೇಕು. ಅದಕ್ಕೆ ಯೋಗ, ಪ್ರಾಣಾಯಾಮ ಶಿಕ್ಷಣವೇ ಅತ್ಯುತ್ತಮ ಮಾರ್ಗ ಎಂದು ಬಣ್ಣಿಸಿದ ಅವರು, ಕೇವಲ ವರ್ಷಕ್ಕೊಮ್ಮೆ ಯೋಗ ದಿನ ಆಚರಿಸದೆ, ಪ್ರತಿನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಮೂಲಕ ಯೋಗ ದಿನಾಚರಣೆಯನ್ನು ಸಾರ್ಥಕಗೊಳಿಸೋಣ ಎಂದು ಆಶಯ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಮಾತನಾಡಿ, ಯೋಗ ಎಂಬುವುದು ಕೇವಲ ದೈಹಿಕ ಕಸರತ್ತಲ್ಲ, ಅದು ನಮ್ಮ ಜೀವನದ ಭಾಗವಾಗಬೇಕು. ಯೋಗದಿಂದ ರೋಗಮುಕ್ತಿ ಎಂಬ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರಿಂದ ನಮ್ಮ ಆಯಸ್ಸು ಹೆಚ್ಚಾಗುವುದಲ್ಲದೆ, ಗಂಭೀರ ಕಾಯಿಲೆಗಳಿಂದ ಐಸಿಯು ಸೇರುವ ಪರಿಸ್ಥಿತಿಗಳನ್ನು ತಪ್ಪಿಸಬಹುದು. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯಬಾರದು ಎಂದ ಅವರು, ಇಂದಿನ ಧಾವಂತದ ಒತ್ತಡ ಜೀವನದಲ್ಲಿ ಯೋಗ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯೋಗ ಗುರು ಬಾಲಚಂದ್ರ ಶರ್ಮಾ ಅವರು ಯೋಗ ತರಬೇತಿ ನೀಡಿದರು. ಯೋಗ ದಿನಾಚರಣೆಯಲ್ಲಿ ಸುಮಾರು 2000 ಕ್ಕೂ ಅಧಿಕ ಸಂಖ್ಯೆಯಲ್ಲಿ ಯೋಗಾಸಕ್ತರು, ಯೋಗ ಪಟುಗಳು ಹಾಗೂ ಸಾರ್ವಜನಿಕರು ಶಿಸ್ತುಬದ್ಧವಾಗಿ ಯೋಗಾಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್, ಆಯುಷ್ ಇಲಾಖೆಯ ಡಾಕ್ಟರ್ ಕೆ ಎಚ್ ಗುರುಬಸವರಾಜ್ ಡಾ. ಮುನಿ ವಾಸುದೇವ ರೆಡ್ಡಿ, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ಡಿ ಪಿ ಐ ರಾಮಚಂದ್ರ, ಬಿ ಈ ಓ ಉಮಾಪತಿ, ದೈಹಿಕ ಪರಿವೀಕ್ಷಕರಾದ ಶ್ರೀಕಾಂತ್, ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಅಶ್ವಿನ್ ಕೋತಂಬರಿ, ಕಸಟ್ಟಿ ಉಮಾಪತಿ, ಈಶ್ವರಿಯ ಬ್ರಹ್ಮಕುಮಾರಿ ವಿದ್ಯಾಲಯದ ಮಾನಸ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ-ಸAಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
*-*-*-*
