ಚಿಕ್ಕೋಡಿ:ನಮ್ಮ ಸಹಕಾರಿಯ ಯಶಸ್ಸಿಗೆ ಗ್ರಾಹಕರು ನಮ್ಮ ಮೇಲಿಟ್ಟಿರುವ ಅಚಲ ವಿಶ್ವಾಸವೇ ಪ್ರಮುಖ ಕಾರಣವಾಗಿದ್ದು, ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಂಸ್ಥೆ ಮುನ್ನಡೆಯುತ್ತಿದೆ. ಸಂಸ್ಥೆಯು ಸದ್ಯದಲ್ಲೇ 1 ಕೋಟಿ ರೂ. ಶೇರು ಬಂಡವಾಳ ಹೊಂದುವ ಗುರಿ ಇಟ್ಟುಕೊಂಡಿದೆ" ಎಂದು ಶ್ರೀ ಸಿದ್ಧಿ ವಿನಾಯಕ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾದ ಸಂಜಯ ಅಡಕೆ ಹೇಳಿದರು.
ಚಿಕ್ಕೋಡಿ ಪಟ್ಟಣದ ಕೇಶವ ಕಲಾ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶ್ರೀ ಸಿದ್ಧಿ ವಿನಾಯಕ ಕ್ರೆಡಿಟ್ ಸೌಹಾರ್ದ ಸಹಕಾರಿಯ 24ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ನಮ್ಮ ಸಂಸ್ಥೆಯಲ್ಲಿ ಸಾಲ ಪಡೆದವರು ಆರ್ಥಿಕವಾಗಿ ಸುಧಾರಣೆ ಕಂಡುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳ್ಳಿ ಮಹೋತ್ಸವ ನಿಧಿ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳ ಹೊಸ ಯೋಜನೆಗಳನ್ನು ಗ್ರಾಹಕರಿಗಾಗಿ ಪರಿಚಯಿಸುತ್ತಿದ್ದೇವೆ" ಎಂದು ಅವರು ಹೆಮ್ಮೆಯಿಂದ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯಡೂರ ಸ್ವಾಭಿಮಾನ ಕೋ-ಆಪ್ ಕ್ರೆಡಿಟ್ ಅಧ್ಯಕ್ಷ ಸುರೇಶ ಮೋಹಿತೆ ಮಾತನಾಡಿ, "ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಿದ್ಧಿ ವಿನಾಯಕ ಸಹಕಾರಿಯು ಜನರ ನಿಜವಾದ ಸಂಸ್ಥೆಯಾಗಿ ಛಾಪು ಮೂಡಿಸಿದೆ. ಸಂಚಾಲಕ ಮಂಡಳಿಯ ಸಹಕಾರ ಮನೋಭಾವ ಮತ್ತು ಸಿಬ್ಬಂದಿಗಳ ಪ್ರಾಮಾಣಿಕತೆಯಿಂದಾಗಿ ಇದು ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಹೊರಹೊಮ್ಮಿದೆ" ಎಂದು ಶ್ಲಾಘಿಸಿದರು. ಅಲ್ಲದೆ, ಸಿಬ್ಬಂದಿ ಹಾಗೂ ಗ್ರಾಹಕರ ಪರವಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಬೃಹತ್ ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸಿದರು.
ಶ್ರೀಕಾಂತ ಕುಲಕರ್ಣಿ 2024-25 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.ಪ್ರಕಾಶ ಹುಬಳಿ ಲೆಕ್ಕಪರಿಶೋಧನೆ ವರದಿ ವಾಚನ ಮಾಡಿದರು.ಅಪ್ಪಾಸಾಹೇಬ ಚವ್ಹಾಣ ಸಂಸ್ಥೆಯ ನಿವ್ವಳ ಲಾಭಗಳ ಮಾಹಿತಿ ನೀಡಿದರು.
ಅರುಣ ನೇರ್ಲಿ ಲೆಕ್ಕ ಪರಿಶೋಧನೆ ನೇಮಕಾತಿ ಬಗ್ಗೆ ಮಾಹಿತಿ ಒದಗಿಸಿದರು.ಸುನೀಲ ರಜಪೂತ ಶ್ರೀ ಸಿದ್ಧಿ ವಿನಾಯಕ ಸಹಕಾರಿಯಲ್ಲಿ ಸಾಲ ಸೌಲಭ್ಯ ಪಡೆದು ಯಶಸ್ವಿಯಾದವರ ಯಶೋಗಾಥೆಯನ್ನು ಸಭೆಯ ಮುಂದಿಟ್ಟರು.ಸಂಜಯ ತೇಲಿ ಸದಸ್ಯರಲ್ಲಿ ಅಂದಾಜು ಪತ್ರ ಮಂಡಿಸಿ, ಅನುಮೋದನೆ ಪಡೆದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಸರಕಾರಿ ಉನ್ನತ ಹುದ್ದೆಗೆ ಆಯ್ಕೆಯಾದ ಸದಸ್ಯರ ಮಕ್ಕಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಪೂಜಾ ಶಿಂಗಾಯಿ ಹಾಗೂ ಆನಂದ ಚೌಗಲಾ ನಿರೂಪಿಸಿದರು. ಸರಸ್ವತಿ ಖಾಂಡವೇಕರ ಮತ್ತು ಸುಜಾತ ದೀಕ್ಷಿತ ವಂದಿಸಿದರು. ಈ ಸಂದರ್ಭದಲ್ಲಿ ಗೋವಿಂದ ಅಡಕೆ, ಸದಾಶಿವ ಮಾಳಿ, ರವೀಂದ್ರ ಬನಸೋಡೆ, ಆನಂದ ಕುಂಬಾರ, ವಿಠ್ಠಲ ಘಾಟಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
