ಯರಗಟ್ಟಿ,ಜೂ,೨೦: ಕೃಷಿ ಇಲಾಖೆ ಸವದತ್ತಿ ಮತ್ತು ಕೆವಿಕೆ ಮತ್ತಿಕೊಪ್ಪ ಇವರ ಸಂಯೋಗದಲ್ಲಿ ಆತ್ಮ ಯೋಜನೆಯಡಿ ರೈತರಿಗೆ ಖೇತ ಬಚಾವೋ ಅಭಿಯಾನ ತರಬೇತಿ ಕಾರ್ಯಕ್ರಮವನ್ನು ತಾಲೂಕಿನ ಸತ್ತಿಗೇರಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಹಾಗೂ ರೈನಾಪೂರ ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಕೆವಿಕೆ ಮತ್ತಿಕೊಪ್ಪದ ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಎಮ್. ಎಸ್. ವಾರದ ಅವರು ಮಾತನಾಡಿ ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ಮಣ್ಣನ್ನು ರಕ್ಷಣೆ ಮಾಡುವುದು, ರೈತರು ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಹಾಳಾಗುತ್ತಿದೆ ಆದಷ್ಟು ಸಮತೋಲಿತ ರಸಗೊಬ್ಬರ ಅಥವಾ ಮಣ್ಣು ಆರೋಗ್ಯ ಚೀಟಿ ಆಧಾರಿತ ರಸಗೊಬ್ಬರ ಬಳಕೆ ಮಾಡಿ ಕೃಷಿ ಮಾಡಿದರೆ ಮಣ್ಣು ಸುರಕ್ಷಣೆ ಮಾಡಬಹುದು ಎಂದು ತಿಳಿಸಿದರು.
ಮಣ್ಣು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ರೈತರ ಆದ್ಯ ಕರ್ತವ್ಯವಾಗಿದ್ದು ಈ ಅಭಿಯಾನವು ಜೂನ್ ಒಂದನೇ ತಾರೀಖಿನಿಂದ ಈ ತಿಂಗಳ ೩೦ನೇ ತಾರೀಖಿನವರೆಗೂ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು ಎಲ್ಲಾ ರೈತರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು.
ಜೈವಿಕ ಗೊಬ್ಬರಗಳ ಬಳಕೆ, ಹಸಿರೆಲೆ ಗೊಬ್ಬರಗಳ ಉಪಯೋಗ, ಬೆಳೆ ಪರಿವರ್ತನೆ, ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣು ಪರೀಕ್ಷೆ, ಯೂರಿಯ ಗೊಬ್ಬರದ ದುಷ್ಪರಿಣಾಮಗಳು ,ನ್ಯಾನೋ ಗೊಬ್ಬರ ಬಳಕೆ ಮುಂತಾದ ರೈತರಿಗೆ ಅನುಕೂಲವಾಗುವ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದರು.
ನಂತರ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಇಲಾಖೆಯ ಯೋಜನೆಗಳ ಕುರಿತು ಮತ್ತು ಸಾವಯವ ಕೃಷಿಯ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಿದರು.
ಈ ವೇಳೆ ಕೃಷಿ ಅಧಿಕಾರಿಗಳಾದ ಎಸ್. ಎಲ್. ದೇಸಾಯಿ, ಎಂ. ಜಿ. ಕಳಸಪ್ಪನವರ, ರೈನಾಪೂರ ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಬಂಟನೂರ, ಮಾಜಿ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಅಳಗೋಡಿ, ವೀರನಗೌಡ ಸರನಾಡಗೌಡರ, ವಿಠ್ಠಲ ಭಾಂಗಿ, ಸಿದ್ದು ಬೆಕ್ಕನ್ನವರ, ಸುರೇಶ ತೋಟದ, ಸೋಮು ರೈನಾಪೂರ, ಕೃಷಿ ಇಲಾಖೆ ಸಿಬ್ಬಂದಿಯಾದ ಉಮೇಶ ಯರಗಟ್ಟಿ ಶ್ರವಣ ಶಿವಪೂಜಿ, ಮಂಜು ಮುಂಡೇಶಿ ಸೇರಿದಂತೆ ಪ್ರಗತಿಪರ ರೈತರು ಹಾಜರಿದ್ದರು.
