ಬೀಳಗಿ- ಕ್ರಷ್ಣಾ ಮತ್ತು ಘಟಪ್ರಭಾ ನದಿಗಳ ಸಂಗಮ ತಾಣವಾಗಿರುವ ಚಿಕ್ಕಸಂಗಮ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಪ್ರವಾಸಿತಾಣವನ್ನಾಗಿ ಮಾಡುವ ಗುರಿಯೊಂದಿಗೆ ಸಕಲ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು,
ತಾಲೂಕಿನ ಐತಿಹಾಸಿಕ ತಾಣವಾಗಿ ಪರಿಣಮಿಸಿರುವ ಚಿಕ್ಕಸಂಗಮ ಸಮಗ್ರ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಮೊದಲ ಹಂತವಾಗಿ 160 ಎಕರೆ ಪರಿಸರ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಸಸಿ ನೆಡುವ ಕಾರ್ಯಕ್ಕೆಚಾಲನೆ ನೀಡಲಾಗಿದೆ ಎಂದು ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ತಿಳಿಸಿದರು.
ಜಿಲ್ಲಾಡಳಿತ, ಅರಣ್ಯ ಹಾಗೂ ಆಹಾರ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ಪ್ರಮಾಣದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಚಿಕ್ಕಸಂಗಮ ಪ್ರದೇಶವನ್ನು ಪರಿಸರ ಸ್ನೇಹಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದದಿಂದ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಭಾಗವನ್ನು ಅಂತರರಾಷ್ಟೀಯ ಮಟ್ಟದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಕಷ್ಟು ಸಸಿಗಳನ್ನು ನೆಟ್ಟು ಪ್ರವಾಸಿಗರಿಗೆ ಆಕರ್ಷಕ ನೆರಳಿನಿಂದ ಕೂಡಿದ ಪರಿಸರ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಚಿಕ್ಕಸಂಗಮ ತಾಣದಲ್ಲಿ ಮೂಲಸೌಕರ್ಯ ಅಭಿವೃದ್ದಿಯ ಜೊತೆಗೆ ಪರಿಸರ ಸಂರಕ್ಷಣೆಯನ್ನು ಸಮಾನವಾಗಿ ಗಮನಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ದಿಯೊಂದಿಗೆ ಪರಿಸರ ಸಮತೋಲನ ಕಾಪಾಡುವುದು ಅಗತ್ಯವಾಗಿದೆ. ಹೀಗಾಗಿ ಚಿಕ್ಕಸಂಗವನ್ನು ಹಸಿರು ತಾಣವನ್ನಾಗಿ ರೂಪಿಸಲು 160 ಎಕರೆ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೇ ಈ ಭಾಗದಲ್ಲಿ ಹಲವು ಪ್ರಭೇದಗಳ ವಲಸೆ ಪಕ್ಷಿಗಳು ಕೂಡಾ ಬರುತ್ತಿದ್ದು, ಅವುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣ್ಣುಗಳ ಗಿಡಗಳನ್ನು ನೆಡಲು ತಿಳಿಸಿದರು. ಸಾರ್ವಜನಿಕರು ಕೂಡಾ ಸಸಿಗಳ ಸಂರಕ್ಷಣೆಯಲ್ಲಿ ಕೈಜೋಡಿಸಲು ಮನವಿ ಮಾಡಿದರು.
ಪರಿಸರ ಸಂರಕ್ಷಣೆಗೆ ಆಹಾರ ಇಲಾಖೆಯಿಂದ 10 ಲಕ್ಷ ರೂ.ಗಳ ಅನುದಾನ ನೀಡಲು ಸ್ಥಳದಲ್ಲಿದ್ದ ಜಂಟಿ ಆಹಾರ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಅವರಿಗೆ ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ದಿಗೆ 25 ಕೋಟಿ ರೂ.ಗಳ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಮಾಡಲಾಗಿದೆ. ಚಿಕ್ಕಸಂಗಮದಿಂದ ಆಲಮಟ್ಟಿವರೆಗೆ ಬೋಟಿಂಗ್ ವ್ಯವಸ್ಥೆ, ಜಲ ಕ್ರೀಡೆಗಳು ಹಾಗೂ ಹೆರಕಲ್ ಭಾಗದಲ್ಲಿ ಪಿಪಿಪಿ ಮಾದರಿಯಲ್ಲಿ ಜಂಗಲ್ ರೆಸಾಲ್ಟ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಲ್ , ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ, ಬೀಳಗಿ ತಹಶೀಲ್ದಾರ ವಿನೋದ ಹತ್ತಳ್ಳಿ, ಆರ್.ಎಫ್.ಓ ಅಮೃತ ಗಂಡೋಶಿ, ರಾಜೇಶ ಪಾಟೀಲ, ಬಿ.ಜಿ.ಕಮತರ, ಅಶೋಕ ರಾಠೋಡ, ಎ.ಸಿ.ಎಫ್ ಸೆಲಬರಾಜ ನಾಯ್ಕರ, ಪ್ರದೀಪ ರಾಠೋಡ ಸೇರಿದಂತೆ ಊರಿನ ಪ್ರಮುಖರಾದ ಹನಮಂತ ಕಾಖಂಡಕಿ, ಶ್ರೀಶೈಲ ಸೂಳಿಕೇರಿ, ಯಮನಪ್ಪ ರೊಳ್ಳಿ, ಜಿ.ಆರ್.ಪಾಟೀಲ, ಚಿದಾನಂದ ನಂದ್ಯಾಳ, ವಿಠಲ ಕಮ್ಮಾರ ಹಾಗೂ ಇತರರು ಉಪಸ್ಥಿತರಿದ್ದರು.
ಚಿಕ್ಕಸಂಗಮ ದೇಸ್ಥಾನಕ್ಕೆ ತೇರು, ಮಂಗಲ ಭವನ ನಿರ್ಮಾಣ
ಕೂಡಲ ಸಂಗಮ ಅಬಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಸಂಗಮ ದೇವಸ್ಥಾನಕ್ಕೆ ಪ್ರಾಧಿಕಾರದ ಅನುದಾನದಡಿ 1.50 ಕೋಟಿ ರೂ.ಗಳ ವೆಚ್ಚದಲ್ಲಿ ತೇರು ಹಾಗೂ ಮಂಗಳ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.
