ಘಟಪ್ರಭಾ,ಜೂ,೨೨ : ಘಟಪ್ರಭಾ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸಂಸ್ಥೆಯ ನಿಯಮಿತ ಇದರ ೭೫ನೇ ವರ್ಷಾಚರಣೆಯ "ಅಮೃತ ಮಹೋತ್ಸವ ವರ್ಷದ" ಅಂಗವಾಗಿ ಸಂಸ್ಥೆಯ ಆಡಳಿತ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಹಕಾರದೊಂದಿಗೆ ಸಂಸ್ಥೆಯ ಸಹಕಾರ ಮಹರ್ಷಿ ಶ್ರೀ ಬಿ.ಎ.ಪಾಟೀಲ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ವಸ್ಥವೃತ್ತ ಮತ್ತು ಯೋಗ ವಿಭಾಗ ಎನ್. ಎಸ್. ಘಟಕ ಮತ್ತು ನ್ಯಾಚರೋಪತಿ ಕಾಲೇಜ ಇವರ ಸಂಯುಕ್ತಾಶ್ರಯದಲ್ಲಿ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" ಎಂಬ ಧ್ಯೇಯ ವಾಕ್ಯದೊಂದಿಗೆ ೧೨ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು. ಕಾರ್ಯಕ್ರಮವು ದಿನಾಂಕ : ೨೧-೦೬-೨೦೨೬ ರಂದು ಬೆಳಿಗ್ಗೆ ೦೬ ಘಂಟೆಗೆ ಆಯುರ್ವೇದ ಮಹಾವಿದ್ಯಾಲಯದ ಮುಕ್ತ ಸಭಾಂಗಣದಲ್ಲಿ ನಡೆಯಿತು.
ಯೋಗಾಭ್ಯಾಸದೊಂದಿಗೆ ಕಾರ್ಯಕ್ರಮವು ಆರಂಭಗೊಂಡು, ಪ್ರಾರ್ಥನೆ ಗೀತೆ, ಅತಿಥಿಗಳ ಸ್ವಾಗತ ಹಾಗೂ ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ನೆರವೇರಿಸಲಾಯಿತು. ಡಾ. ರಾಜಶೇಖರ ಎಸ್. ಜಕಾತಿ ಅವರು ಗಣ್ಯಮಾನ್ಯರಿಗೆ ಸ್ವಾಗತ ಕೋರಿದರು. ನಂತರ ಡಾ. ಜೆ. ಕೆ. ಸರ್ಮಾ ಪ್ರಾಂಶುಪಾಲರು ಪ್ರತಿನಿತ್ಯ ಯೋಗ ಮಾಡುವ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಸ್ವಸ್ಥವೃತ್ತ ಮತ್ತು ಯೋಗ ವಿಭಗದ ಮುಖ್ಯಸ್ಥರಾದ ಡಾ. ಎಲ್. ಎಂ. ತೆಗ್ಗಿ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟ ಯೋಗದ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ರಾಜೇಶ್ ಶಂಕರ ಪವಾರ್ (ಪ್ರಾಸ್ಟಿಕ ಸರ್ಜನ್) ಪ್ರಾಚಾರ್ಯರು ಜೆ. ಎನ್.ಎಂ.ಸಿ. ಕಾಹೇರ್, ಬೆಳಗಾವಿ ಅವರು ಯೋಗ ಮತ್ತು ಆಯುರ್ವೇದ ಪ್ರತಿನಿತ್ಯದ ಜೀವನದಲ್ಲಿ ಅತ್ಯಗತ್ಯ ಹಾಗೂ ಇಂತಹ ಕಾರ್ಯಕ್ರಮಗಳು ಯುವಜನರಿಗೆ ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅರ್ಧಯಕ್ಷತೆಯನ್ನು ವಹಿಸಿದ್ದ ಶ್ರೀ ಜೆ. ಜಿ. ಸಹಕಾರಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಿ.ಕೆ.ಎಚ್. ಪಾಟೀಲ ಅವರು ಉತ್ತಮ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗಾಗಿ ಯೋಗಾಭ್ಯಸವನ್ನು ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಆಯುರ್ವೇದ ಮತ್ತು ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು ಯೋಗ ನೃತ್ಯ ಮತ್ತು ೭೫ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಸಿದರು.
ಡಾ. ಎಸ್. ಬಿ. ಚೌಗಲಾ ಅವರು ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಯುರ್ವೇದಿಕ ಮತ್ತು ನ್ಯಾಚುರೋಪತಿ ಕಾಲೇಜಿನ ಬೋಧಕ ವೃಂದ ಮತ್ತು ಆಫೀಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿ/ವಿದ್ಯಾಥಿನಿಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
