ಇಂಡಿ,ಜೂ,೨೨: ಯೋಗವು ಭಾರತದ ಪ್ರಾಚೀನ ಋಷಿ-ಮುನಿಗಳು ಇಡೀ ವಿಶ್ವಕ್ಕೆ ನೀಡಿರುವ ಅಮೂಲ್ಯ ಕೊಡುಗೆಯಾಗಿದ್ದು, ಜೀವನ ನಿತ್ಯೋತ್ಸವವಾಗಲು ಪ್ರತಿಯೊಬ್ಬರೂ ಯೋಗ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ರವಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ೧೨ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಧೇಶಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಯೋಗವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಇದು ಮನುಷ್ಯನ ಮನಸ್ಸು, ದೇಹ, ಉಸಿರಾಟವನ್ನು ನಿಯಂತ್ರಿಸಿ, ಆಂತರಿಕ ಶಾಂತಿ ಕಾಪಾಡಲು ಸಹಕಾರಿಯಾಗಿದೆ ಎಂದು ಹೇಳಿದರು.
ಶಿಕ್ಷಕ ಶ್ರೀಧರ ಹಿಪ್ಪರಗಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಒತ್ತಡ-ಆತಂಕ ನಿವಾರಿಸಿ, ಏಕಾಗ್ರತೆ, ನೆನಪಿನ ಶಕ್ತಿಯನ್ನು ವೃದ್ಧಿಸಲು ಯೋಗವು ಪರಿಪೂರ್ಣ ಅಭ್ಯಾಸವಾಗಿದೆ ಎಂದು ಹೇಳಿದರು. ಕೆಬಿಎಸ್ ಮುಖ್ಯ ಶಿಕ್ಷಕ ಎಸ್ ಎಸ್ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ತನ್ನ ಜೀವನವನ್ನು ಯೋಗ ಜೀವನವನ್ನಾಗಿ ಬದಲಾಯಿಸಿಕೊಳ್ಳಬೇಕು. ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ಸಮತೋಲನದಲ್ಲಿಡುವ ಅದ್ಭುತ ಜೀವನ ಶೈಲಿಯಾಗಿದೆ ಎಂದು ಹೇಳಿದರು.
ದೈಹಿಕ ಶಿಕ್ಷಕ ಎಸ್ ಎಚ್ ತಳವಾರ ಯೋಗಾಭ್ಯಾಸ ಮಾಡಿಸುತ್ತಾ, ವಿವರಣೆ ನೀಡಿದರು. ಕೆಜಿಎಸ್ ಮುಖ್ಯ ಶಿಕ್ಷಕ ಎಸ್ ಬಿ ಕೋಳಿ, ಯುಬಿಎಸ್ ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಹಾಗೂ ಎಲ್ಲ ಶಿಕ್ಷಕ ಸಿಬ್ಬಂದಿ ವರ್ಗದವರು, ಮಕ್ಕಳು ಭಾಗವಹಿಸಿದ್ದರು.
