ಅಥಣಿ: ಪಟ್ಟಣದ ಹೃದಯಭಾಗದ ಶಿವಯೋಗಿ ವೃತ್ತದ ಹತ್ತಿರ ಹೆಸ್ಕಾಂ ಎದುರು ಇಂದು ಬೆಳಗಿನ ಜಾವ ಸಿಮೆಂಟ್ ಲಿಕ್ವಿಡ್ ಹೊತ್ತೊಯ್ಯುತ್ತಿದ್ದ ಬೃಹತ್ ವಾಹನವೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಬೆಳಗಿನ ಜಾವ ಸಿಮೆಂಟ್ ಮಿಶ್ರಿತ ದ್ರಾವಣವನ್ನು ಸಾಗಿಸುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿದೆ. ವೇಗವಾಗಿ ಬಂದ ವಾಹನವು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಲವಾಗಿ ಡಿಕ್ಕಿ ಹೊಡೆದು ನಂತರ ರಸ್ತೆಯಲ್ಲೇ ಪಲ್ಟಿಯಾಗಿದೆ. ಘಟನೆಯ ತೀವ್ರತೆಗೆ ವಿದ್ಯುತ್ ಕಂಬ ಸಂಪೂರ್ಣ ಮುರಿದು ಹೋಗಿದ್ದು ವಾಹನವು ಸಂಪೂರ್ಣವಾಗಿ ಮಗುಚಿಕೊಂಡಿದೆ.
ಈ ಅಪಘಾತದಲ್ಲಿ ವಾಹನದ ಚಾಲಕನಿಗೆ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಅಥಣಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಶಿವಯೋಗಿ ವೃತ್ತವೂ ಒಂದು. ದಿನದ ಇತರೆ ಸಮಯದಲ್ಲಿ ಇಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರ ಸಂಚಾರ ಸದಾ ಹೆಚ್ಚಿರುತ್ತದೆ. ಆದರೆ ಅಪಘಾತವು ಬೆಳಗಿನ ಜಾವ ಸಂಭವಿಸಿದ್ದರಿಂದ ಜನಸಂಚಾರ ವಿರಳವಾಗಿತ್ತು. ಹೀಗಾಗಿ ದೊಡ್ಡ ಮಟ್ಟದ ಸಾವು-ನೋವು ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗೆ ಹೆಚ್ಚಿನ ಹಾನಿ ಸಂಭವಿಸುವುದು ತಪ್ಪಿದೆ ಎನ್ನಬಹುದು.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಲ್ಟಿಯಾದ ವಾಹನ ಮತ್ತು ಜಖಂಗೊಂಡ ವಿದ್ಯುತ್ ಕಂಬವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಂಚಾರ ದಟ್ಟಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.


