ಕೊಲಂಬೋ, ನವೆಂಬರ್ 30: ಶ್ರೀಲಂಕಾ ದೇಶವು ದಿತ್ವಾ ಚಂಡಮಾರುತದ ಅಬ್ಬರಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಈ ಭೀಕರ ಸೈಕ್ಲೋನ್ಗೆ ಬಲಿಯಾದವರ ಸಂಖ್ಯೆ 200 ದಾಟಿದೆ. ಒಂದು ವರದಿ ಪ್ರಕಾರ ಸಾವಿನ ಸಂಖ್ಯೆ 218ಕ್ಕಿಂತ ಹೆಚ್ಚಾಗಿದೆ. ಸುಮಾರು 200-250 ಮಂದಿ ಕಾಣೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಭಾರೀ ಮಳೆ, ಗಾಳಿ, ಪ್ರವಾಹ, ಭೂಕುಸಿತಗಳು ಸಂಭವಿಸುತ್ತಲೇ ಇದ್ದು, ಲಕ್ಷಾಂತರ ಮನೆಗಳು ಮತ್ತು ಕುಟುಂಬಗಳು ಬಾಧಿಗೊಂಡಿವೆ. ಶ್ರೀಲಂಕಾ ಸರ್ಕಾರವು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಘೋಷಿಸಿ, ಸಕಲ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಶ್ರೀಲಂಕಾಗೆ ಭಾರತವೂ ಕೂಡ ನೆರವಿನ ಹಸ್ತ ಚಾಚಿದೆ. ರಕ್ಷಣಾ ಕಾರ್ಯದಲ್ಲಿ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ.
ಭಾರತೀಯ ವಾಯುಪಡೆಯು ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆ ನಡೆಸಿ ಎಂಐ-17 ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ. ಪ್ರವಾಹದಲ್ಲಿ ಸಿಲುಕಿದ್ದ ಹಲವು ಜನರನ್ನು ಈ ಆಪರೇಷನ್ನಲ್ಲಿ ರಕ್ಷಿಸಲಾಗಿದೆ. ಇದರಲ್ಲಿ ಪಾಕಿಸ್ತಾನೀ ಪ್ರಜೆಯೂ ಸೇರಿ ಹಲವು ವಿದೇಶೀಯರೂ ಇದ್ದಾರೆ.