ಹಸಿರು ಕ್ರಾಂತಿ ವರದಿ ಬಾಗಲಕೋಟೆ
ನ್ಯಾಷನಲ್ ಮೆಡಿಕೋಸ್ ಆರ್ಗನೈಜೇಶನ್ ಹಾಗೂ ಆರ್.ಎನ್.ಸಿ. ಆಸ್ಪತ್ರೆ ಸಹಯೋಗದಲ್ಲಿ ಪ್ರತಿ ಕುಟುಂಬಕ್ಕೂ ಅಗತ್ಯವಿರುವ ಪಾರ್ಸಿ/ ಲಕ್ವಾ ಕುರಿತು ಪುಸ್ತಕ ''ದಿ ಗೋಲ್ಡನ್ ಅವರ್'' ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಲೇಖಕ, ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣನ್ಯೂಸ್ನ 2026ರ ಹೆಲ್ತ್ಕೇರ್ ಎಕ್ಸಲೆನ್ಸ್ ಅವಾರ್ಡ್ ವಿಜೇತ ಡಾ.ರಾಕೇಶ ಎ.ವಿ. ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.30ರಂದು ಬೆಳಗ್ಗೆ 10 ಗಂಟೆಗೆ ಎಸ್ಎನ್ಎಮ್ಸಿ ಮೆಡಿಕಲ್ ಕಾಲೇಜನ ಅತ್ರೇಯ ಹಾಲ್ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಟಿಕೀನಮಠದ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಆಗಮಿಸಲಿದ್ದಾರೆ. ಹಿರಿಯ ಮೂತ್ರಪಿಂಡ ತಜ್ಞ ಡಾ.ಬಿ.ಎಸ್.ಪಾಟೀಲ ಅಧ್ಯಕ್ಷತೆ ವಹಿಸುವರು. ಎನ್ಎಂಓ ಕರ್ನಾಟಕ ಉತ್ತರದ ಕಾರ್ಯದರ್ಶಿ ಡಾ.ಎಸ್.ವೈ.ಮುಲ್ಕಿಪಾಟೀಲ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ತಿಳಿಸಿದರು.
ಈ ಪುಸ್ತಕದ ಮೂಲಕ ತಮ್ಮ ಮುಖ್ಯ ಉದ್ದೇಶ ಪುಸ್ತಕ ಮಾರಾಟವಲ್ಲ, ಸ್ಟ್ರೋಕ್ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿ, ಸಾಧ್ಯವಾದಷ್ಟು ಕುಟುಂಬಗಳಿಗೆ ಜೀವ ಉಳಿಸುವ ಮಾಹಿತಿ ತಲುಪಿಸುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಸೃಷ್ಠಿ ರಾಕೇಶ, ಡಾ.ಗಂಗಾಧರ ಅಂಗಡಿ, ಮಂಜುನಾಥ ಸ್ವಾಮಿ ಇದ್ದರು.
ಪಾರ್ಶ್ವವಾಯು (ಸ್ಟ್ರೋಕ್) ಸಂಭವಿಸಿದಾಗ ಸಕಾಲದಲ್ಲಿ ಚಿಕಿತ್ಸೆ ದೊರೆತರೆ ರೋಗಿಯ ಜೀವ ಉಳಿಸುವುದರ ಜತೆಗೆ ಅಂಗವೈಕಲ್ಯವನ್ನೂ ಕಡಿಮೆ ಮಾಡಬಹುದು. ಆದ್ದರಿಂದ ಪಾರ್ಶ್ವವಾಯುವಿನ ಲಕ್ಷಣಗಳನ್ನು ಗುರುತಿಸಿ ತಕ್ಷಣ ಆಸ್ಪತ್ರೆಗೆ ಕರೆದ್ಯೊಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಸ್ಟ್ರೋಕ್ನ ಪ್ರಮುಖ ಲಕ್ಷಣಗಳನ್ನು ಸಾರ್ವಜನಿಕರು ಸುಲಭವಾಗಿ ಗುರುತಿಸುವ ವಿಧಾನ ತಿಳಿದುಕೊಳ್ಳಬೇಕು. ದೇಹದ ಸಮತೋಲನ ಕಳೆದುಕೊಳ್ಳುವುದು, ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ, ಮುಖದ ಒಂದು ಭಾಗ ಬಾಗುವುದು, ಕೈ ಅಥವಾ ಕಾಲಿನಲ್ಲಿ ಬಲ ಕುಂದುವುದು ಹಾಗೂ ಮಾತಿನಲ್ಲಿ ತೊದಲುವಿಕೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
-ಡಾ.ರಾಕೇಶ ಎ.ವಿ, ಲೇಖಕರು