ರಾಮದುರ್ಗ: ಇಂದಿನ ತಂತ್ರಜ್ಞಾನ ಯುಗದಲ್ಲಿ ಜೀವನಕ್ಕೆ ಅಗತ್ಯ ಇರುವ ಜ್ಞಾನ ಸಂಪಾದಿಸುವ ಕಲೆಯನ್ನು ಯಾವ ರೀತಿ ಪಡೆದುಕೊಳ್ಳಬೇಕೆಂಬುದನ್ನು ಸ್ಥಳೀಯ ಜಿಗಿ ಟಾಕ್ ಸಂಘಟನೆಯಿಂದ ಅನುಭವಿ ತಜ್ಞರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸ ತಂದಿದೆ ಎಂದು ನಿವೃತ್ತ ಪ್ರಾಧ್ಯಾಪಕ ಜಿ.ಬಿ.ವಡವಡಗಿ ಹರ್ಷವ್ಯಕ್ತಪಡಿಸಿದರು.
ಸ್ಥಳೀಯ ಗುರುಭವನದಲ್ಲಿ ಶನಿವಾರ ಜಿಗಿ ಟಾಕ್ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ ಎಂಬುದು ಸುಮ್ಮನೆ ಬರುವದಲ್ಲ. ಸತತ ಪರಿಶ್ರಮ ಹಾಗೂ ಅಗತ್ಯ ಮಾರ್ಗದರ್ಶನದಿಂದ ಮಾತ್ರ ಸಾಧ್ಯವಿದ. ಈ ಕಾರ್ಯಕ್ರಮದಿಂದ ದೊರೆಯುವ ಮಾಹಿತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಲಭವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ವಿಜಯಪುರದ ಮನಿಶಾ ಕೆ ಅವರು ಉಜ್ವಲ ಭವಿಷ್ಯಕ್ಕಾಗಿ ನಿಮ್ಮನ್ನು ನೀವೆ ರೂಪಿಸಿಕೊಳ್ಳಿ, ಮಲೆಷಿಯಾ ಸಿಟಿ ಬ್ಯಾಂಕ ಉಪಾಧ್ಯಕ್ಷ ಆನಂದ ಎಚ್ ಅವರು ಸಣ್ಣ ಅಭ್ಯಾಸಗಳು ಹೇಗೆ ನಿಮ್ಮನ್ನು ದೊಡ್ಡವರನ್ನಾಗಿ ಮಾಡುತ್ತವೆ, ಬೆಳಗಾವಿಯ ಆದಿತಿ ಡಿ ಅವರು ವೃತ್ತಿ ಜೀವನಕ್ಕೆ ಬೇಕಾದ ಪಾಠಗಳು, ಬೆಳಗಾವಿಯ ಜಿತೇಂದ್ರ ವಿ ಅವರು ಹಣದ ಜೊತೆಗಿನ ನಿಮ್ಮ ಸಂಬಂಧಗಳು ನಿಮ್ಮ ಭವಿಷ್ಯವನ್ನು ಹೇಗೆ ನಿರ್ಧರಿಸುತ್ತವೆ, ಸೌಥ ಇಸ್ಟ್ ಏಷಿಯಾದ ವಿನಾಯಕ ಜಿ ಅವರು ನಾಯಕತ್ವ ಮತ್ತು ಸೃಜನಾತ್ಮಕ ಚಿಂತನೆಯ ಆಟಗಳು, ಧಾರವಾಡದ ಅರುಣ ಪಿ ಅವರು ತಂತ್ರಜ್ಞಾನದಿಂದ ಭವಿಷ್ಯಕ್ಕೆ ಸಿದ್ಧಗೊಳಿಸುವ ಸ್ಮಾರ್ಟ ಕಲಿಕೆ, ಬೆಂಗಳೂರಿನ ಯು.ಬಿ.ಐ ಮ್ಯಾನೇಜರ್ ರೋಹಿಣಿ ಜೆ ಅವರು ಉತ್ತಮ ಭವಿಷ್ಯಕ್ಕಾಗಿ ಹಣದ ಬಗ್ಗೆ ಸರಿಯಾದ ತಿಳುವಳಿಕೆ, ಪ್ರಾಚಾರ್ಯ ಎಂ.ಬಿ.ಪಾಟೀಲ ಅವರು ಗಾದೆಮಾತುಗಳ ಮರುಚಿಂತನೆ ಹಾಗೂ ಹುಬ್ಬಳ್ಳಿಯ ತಜ್ಷ ವೈದ್ಯ ಡಾ. ಮಹೇಶ ಅವರು ದೇಹ ಮತ್ತು ಪ್ರಕೃತಿ: ಒಂದು ಅದ್ಬುತ ಸಂಬಂಧ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ಸಂಘಟನೆಯ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ಪ್ರವೀಣ ಫತ್ತೇಪೂರ, ಏಕನಾಥ ಕೊಣ್ಣೂರ, ಡಾ. ಸಿ.ವೈ.ಕುಲಗೋಡ, ಎಸ್.ಎಂ.ಹುರಕಡ್ಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
