ಹುನಗುಂದ; ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾಗಿರುವ ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಟಿ ನಾರಾಯಣಗೌಡ್ರ ಬಣದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕ ಘಟಕದ ಪದಾಧಿಕಾರಿಗಳು ತಾಲೂಕ ಆಡಳಿತದ ಮುಂದೆ ಅನಿರ್ಧಿಷ್ಠ ಧರಣಿ ಪ್ರಾರಂಭಿಸಿದ್ದಾರೆ. ಈ ವೇಳೆ ಮಾತನಾಡಿದ ಕರವೇ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ರಮ್ಜಾನ ನದಾಫ್ ಮಾತನಾಡಿ ಅಮೀನಗಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ರಸ್ತೆಯಲ್ಲಿ ಸರ್ಕಾರಿ ಬೆಲೆ ಬಾಳುವ ಜಾಗ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಅನಧಿಕೃತ ಕಟ್ಟಡ ಮತ್ತು ಒತ್ತುವರಿಗಳು ಹೆಚ್ಚಾಗುತ್ತಿವೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಹಾನಿಯಾಗುವ ಜೊತೆಗೆ ಕಾನೂನು ಬಾಹೀರ ಚಟುವಟಿಕೆಗಳು ನಡೆದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವುದರ ಜೊತೆಗೆ ಪಾದಚಾರಿಗಳಿಗೂ ಸಂಕ? ಎದುರಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಈಗಾಗಲೆ ಹಲವು ಬಾರಿ ಈ ಜಾಗೆಯ ಮಾಲಿಕತ್ವದ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿ ವರ್ಗಕ್ಕೆ ಮೌಖಿಕ ಮತ್ತು ಪತ್ರ ಮುಖೇನ ವಿನಂತಿಸಿದಾಗಲೂ ಬರೀ ಬೋಗಸ್ ಉತ್ತರ ಮತ್ತು ಕಾನೂನು ಬಾಹೀರ ದಾಖಲೆಗಳನ್ನು ನೀಡಿದ್ದಾರೆ. ಅಕ್ರಮ ಕಟ್ಟಡದ ಮಾಲಕಿಕರು ಮತ್ತು ಅದರ ನಿರ್ವಹಣೆ ಜಾವಾಬ್ದಾರಿ ಕುರಿತು ಸ್ಪಷ್ಟ ಮಾಹಿತಿ ಮತ್ತು ದಾಖಲೆ ನೀಡುವಂತೆ ಈ ಧರಣೆ ಕೈಗೊಳ್ಳಲಾಗಿದೆ. ಸ್ಪಷ್ಟ ದಾಖಲೆಗಳನ್ನು ಸಂಬಂಧಿಸಿದ ಅಧಿಕಾರಿಗಳು ನೀಡುವವರೆಗೂ ಈ ಧರಣಿ ಮುಂದುವರೆಯುತ್ತದೆ ಎಂದು ರಮ್ಜಾನ್ ನದಾಫ್ ತಿಳಿಸಿದರು. ತಾಲೂಕ ಅಧ್ಯಕ್ಷ ರೋಹಿತ್ ಬಾರಕೇರ ಮಾತನಾಡಿ ಇಂತಹ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮತ್ತು ಕಾಣದ ಕೈಗಳಿಗೆ ಅಧಿಕಾರಿಗಳು ಸಾತ್ ನೀಡಿ ಸರ್ಕಾರಿ ಜಾಗೆಯನ್ನು ಪರಭಾರೆ ಮಾಡಿದ ದಾಖಲೆಗಳು ಸಾಕಷ್ಟಿವೆ. ಇದರಿಂದ ಪಟ್ಟಣದ ಸೌಂದರ್ಯ ಮತ್ತು ಸುಗಮ ಸಂಚಾರ ಕಾಪಾಡುವ ಜವಾಬ್ದಾರಿ ತಪ್ಪಿದಂತಾಗುತ್ತದೆ. ಆದರೆ ಕೆಲವರ ಒತ್ತಡಕ್ಕೆ ಮಣಿದು ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ರೋಹಿತ್ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಕೂಡಲೇ ಸಮಗ್ರ ಸರ್ವೆ ನಡೆಸಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಗುರುತಿಸಿ ಕಾನೂನು ಪ್ರಕಾರ ತೆರವುಗೊಳಿಸಬೇಕು. ಸಾರ್ವಜನಿಕ ರಸ್ತೆ, ಚರಂಡಿ ಹಾಗೂ ಸರ್ಕಾರಿ ಜಾಗಗಳ ಮೇಲಿನ ಎಲ್ಲ ರೀತಿಯ ಒತ್ತುವರಿಯನ್ನು ತೆರವುಗೊಳಿಸಿ ಜನರಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಕರವೇ ಘಟಕದ ಅಶೋಕ ಪೂಜಾರ, ಹುಸೇನ್ ಸಂದಿಮನಿ, ಪ್ರವೀಣ ವಾಲೀಕಾರ, ಜಹೀರ ಸಂಗಮಕರ, ನಾಗರಾಜ ರಾಠೋಡ, ಹಸನ ಕಲಕಬಂಡಿ, ಮುತ್ತಣ್ಣ ಕಲಮಡಿ, ಶೋಭಾ ಅರಿಕೆ, ಸವಿತಾ ಹಿರೇಮಠ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಜೊತೆಗೆ ನವಲಗುಂಡ ತಾಲೂಕಿನ ನಾಗನೂರ ಗ್ರಾಮದ ಆತ್ಮಾನಂದ ಡೊಳ್ಳಿನ ಪದ ತಂಡದ ಇಮಾಮಸಾಬ ವಲ್ಲೆಪ್ಪನವರ, ದ್ಯಾಮಪ್ಪ ಪೂಜಾರ, ದಾವಲಸಾಬ ವಲ್ಲೆಪ್ಪನವರ, ಹಸನಸಾಬ ಗದ್ದಿಗಿ ಮತ್ತು ಮಕ್ತಮಸಾಬ ಗೋವಿನಕೊಪ್ಪ ಅವರಿಂದ ತತ್ವಪದ ನಡೆದವು.
"
