ಮಹಾಲಿಂಗಪುರ, ಜು. ೬: ಸಮೀಪದ ಚಿಮ್ಮಡ ಗ್ರಾಮದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮುದಾಯದ ಬಹುದಿನಗಳ ಕನಸಾಗಿದ್ದ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಮಂಜೂರಾದ ?೫ ಲಕ್ಷ ಅನುದಾನದ ಕಾಮಗಾರಿಗೆ ಶಾಸಕ ಸಿದ್ದು ಸವದಿ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿದ್ದು ಸವದಿ ಅವರು, ಹಡಪದ ಅಪ್ಪಣ್ಣ ಅವರು ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಮಹನೀಯರಾಗಿದ್ದು, ಅವರ ತತ್ವಾದರ್ಶಗಳನ್ನು ಪಾಲಿಸುವ ಸಮಾಜದ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದರು. ಸಮುದಾಯ ಭವನಗಳು ಕೇವಲ ಕಟ್ಟಡಗಳಾಗಿರದೆ, ಸಮಾಜದ ಜನರನ್ನು ಒಗ್ಗೂಡಿಸುವ ಹಾಗೂ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಲಿವೆ ಎಂದು ತಿಳಿಸಿದರು.
ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು. ಗ್ರಾಮೀಣ ಭಾಗದ ಎಲ್ಲ ಸಮುದಾಯಗಳಿಗೂ ಮೂಲಸೌಕರ್ಯ ಕಲ್ಪಿಸುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಮ.ನಿ. ಪ್ರಭು ಸ್ವಾಮೀಜಿಗಳು ಆಶೀರ್ವಚನ ನೀಡಿ, ಸಮಾಜದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಶಿಕ್ಷಣ, ಸಂಘಟನೆ ಹಾಗೂ ಸಾಮಾಜಿಕ ಜಾಗೃತಿಯ ಮೂಲಕ ಸಮಾಜ ಇನ್ನ? ಪ್ರಗತಿಯತ್ತ ಸಾಗಬೇಕು. ನಿರ್ಮಾಣವಾಗುತ್ತಿರುವ ಸಮುದಾಯ ಭವನವು ಸಮಾಜದ ಎಲ್ಲ ವರ್ಗದವರನ್ನು ಒಗ್ಗೂಡಿಸುವ ಕೇಂದ್ರವಾಗಲಿ ಎಂದು ಹಾರೈಸಿದರು.
ಸಮುದಾಯದ ಮುಖಂಡ ಶಿವಾನಂದ ನಾವಿ ಮಾತನಾಡಿ, ಸಮುದಾಯ ಭವನ ನಿರ್ಮಾಣವು ನಮ್ಮ ಸಮಾಜದ ಬಹುವ?ಗಳ ಬೇಡಿಕೆಯಾಗಿತ್ತು. ಶಾಸಕರ ಪ್ರಯತ್ನದಿಂದ ಅನುದಾನ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಈ ಭವನದಿಂದ ಸಮಾಜದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಬೀರಪ್ಪ ಹಳಮಣಿ, ಪ್ರಭು ಮುಧೋಳ, ಮನೋಜ ಹಟ್ಟಿ, ಚೆನ್ನಪ್ಪ ತೇಲಿ, ಪ್ರಕಾಶ ಪಾಟೀಲ, ಕುಮಾರ್ ಪೂಜಾರಿ, ಆನಂದ ಕೌಟಿ, ಅವ್ವಣ್ಣಪ್ಪ ಮುಗಳಕೋಡ, ನಾಗಪ್ಪ ನಾವಿ, ಪ್ರಭು ನಾವಿ, ಅಲ್ಲಪ್ಪ ನಾವಿ, ಮಹಾಲಿಂಗ ನಾವಿ, ಬಸವರಾಜ ನಾವಿ, ಶ್ರೀಶೈಲ ನಾವಿ ಸೇರಿದಂತೆ ಸಮಾಜದ ಮುಖಂಡರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
