ರಾಮದುರ್ಗ: ತರಬೇತಿ ಅವಧಿಯಲ್ಲಿ ಕರಗತ ಮಾಡಿಕೊಂಡ ಕೌಶಲ್ಯಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಪ್ರಾಮಾಣಿವಾಗಿ ಶ್ರದ್ಧೆಯಿಂದ ಕಾರ್ಯಚಟುವಟಿಕೆ ಮಾಡಿದರೆ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದು ಕೆನರಾ ಬ್ಯಾಂಕಿನ ಹಿರಿಯ ಪ್ರಬಂಧಕ ಅಜಿತ್ ರಾಜನ್ನವರ ಹೇಳಿದರು.
sಸ್ಥಳೀಯ ಕರ್ನಾಟಕ ಬಂಜಾರಾ ರೂರಲ್ ಡೆವೆಲಪಮೆಂಟ ಸೊಸೈಟಿಯಲ್ಲಿ ಕೆ-ಬರ್ಡ್ಸ್ ಸಂಸ್ಥೆ ಹಮ್ಮಿಕೊಂಡ ಜವಳಿ ವಲಯದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಟೇಲರಿಂಗ್ನಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಕಿಟ್ ಹಾಗೂ ಪ್ರಮಾಣ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯಗಳಿದ್ದು, ಶಿಶು ಹಂತದ ಸಾಲ ೫೦ ಸಾವಿರ, ಕಿಶೋರ ಹಂತದ ಸಾಲ ೫ ಲಕ್ಷ ಹಾಗೂ ತರುಣ ಹಂತದ ಸಾಲ ೧೦ ಲಕ್ಷದ ವರೆಗೆ ನೀಡಲಾಗುತ್ತಿದೆ. ಅಗತ್ಯ ಇದ್ದರೇ ಮದ್ರಾ ಸಾಲ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ಧಾರವಾಡದ ಕರಕುಶಲ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್ ವಿ.ಎನ್ ಮಾತನಾಡಿ, ಜವಳಿ ಇಲಾಖೆಯಿಂದ ಸ್ವ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಮುದ್ರಾ ಯೋಜನೆಯಿಂದ ೫೦ ಸಾವಿರ ಸಾಲ ಪಡೆದುಕೊಂಡರೆ ೧೦ ಸಾವಿರ ಸಬ್ಸಿಡಿ ಲಭಿಸುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಅವರು, ಕೇಂದ್ರ ಸರಕಾರ ಸಾಮಾಜಿಕ ಸುರಕ್ಷಾ ವಿಮಾ ಯೋಜನೆಗಳ ಹಾಗೂ ಕೆನರಾ ಬ್ಯಾಂಕಿನ ಕಾನ್ಸರ್ ಕೇರ್ ಏಂಜಿಲ್ ಖಾತೆಯ ಬಗ್ಗೆ ಮಾಹಿತಿ ನೀಡಿದರು.
ಪಿ.ಎಸ್.ಐ ಸವಿತಾ ಮುನ್ಯಾಳ ಅವರು, ಮಹಿಳಾ ಸಬಲೀಕರಣ ಬಗ್ಗೆ ಮಾತನಾಡಿದರು. ಕೆ.ಬರ್ಡ್ಸ್ ಸಂಸ್ಥೆಯ ಅಧ್ಯಕ್ಷ ಕಾಂತೇಶ ರಾಠೋಡ ಅಧ್ಯಕ್ಷತೆ ವಹಿಸಿ ಸಂಸ್ಥೆಯ ವರದಿ ಮಂಡಿಸಿದರು.
ಟೇಲರಿಂಗ್ ತರಬೇತಿ ಪೂರೈಸಿದ ಫಲಾನುಭವಿಗಳಿಗೆ ಕಿಟ್ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಕೆನರಾ ಬ್ಯಾಂಕ ಕೃಷಿ ಅಭಿವೃದ್ಧಿ ಅಧಿಕಾರಿ ಕಾಶಿನಾಥ ಬುತಾಳೆ, ಕರಕುಶಲ ಇಲಾಖೆಯ ಅಧಿಕಾರಿ ಶಶಾಂಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಮಂಜುಳಾ ಬೆಟಗೇರಿ ಸ್ವಾಗತಿಸಿದರು. ರಕ್ಷಿತಾ ಬೆಣ್ಣಿ ನಿರೂಪಿಸಿದರು. ಕವಿತಾ ರಾಠೋಡ ವಂದಿಸಿದರು.
