ಹಸಿರು ಕ್ರಾಂತಿ ವರದಿ ನವದೆಹಲಿ
ಯುವಶಕ್ತಿ ಭಾರತದ ಪ್ರಬಲ ಶಕ್ತಿ, ಹಳ್ಳಿಗಳೇ ರಾಷ್ಟ್ರದ ಜೀವಾಳ ಎಂದೇ ನಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಜು.26 ರಂದು ವಿಕಸಿತ್ ವೈಬ್ರಂಟ್ ವಿಲೇಜ್-2006 ವಿಶಿಷ್ಟ ಕಾರ್ಯಕ್ರಮ ಮೂಲಕ ಯುವಜನರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ ಆಯ್ದ 400ಕ್ಕೂ ಹೆಚ್ಚು ಯುವ ಜನರು ಮಹತ್ತರ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ದೇಶಾದ್ಯಂತದಿಂದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಸಿದ್ದು, ಇದರಲ್ಲಿ ಪಾಲ್ಗೊಂಡಿದ್ದ 3 ಲಕ್ಷಕ್ಕೂ ಅಧಿಕ ಯುವಜನರ ಪೈಕಿ ಅಂತಿಮವಾಗಿ 400 ಅರ್ಹ ವಿದ್ಯಾರ್ಥಿ-ಯುವಜನರನ್ನು ಆಯ್ಕೆ ಮಾಡಲಾಗಿದೆ ಎಂದರು.
ಜೂನ್ 4 ರಿಂದ ಜೂನ್ 30 ರವರೆಗೆ ʼವಿಕಸಿತ್ ವೈಬ್ರಂಟ್ ವಿಲೇಜ್ ಪ್ರೋಗ್ರಾಂ-2026 ಆಯೋಜಿಸಿ ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 74 ವೈಬ್ರಂಟ್ ಗಡಿ ಗ್ರಾಮಗಳನ್ನು ಸಂಪರ್ಕಿಸುವ ಅರ್ಹ ಯುವಕರನ್ನು ಆಯ್ಕೆ ಮಾಡಲಾಗಿದೆ. ಭಾರತದ ಗಡಿ ಪ್ರದೇಶಗಳ ಸಾಮಾಜಿಕ-ಆರ್ಥಿಕ, ಭೂದೃಶ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿ ಆಕಾಂಕ್ಷೆಗಳಿಗೆ ನೇರವಾಗಿ ಸ್ಪಂದಿಸುವ ದಿಸೆಯಲ್ಲಿ ಇದೊಂದು ವಿಶಿಷ್ಟ ಹೆಗ್ಗುರುತು ಎಂದು ಬಣ್ಣಿಸಿದರು.
26 ಸಂಜೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್:
ಪ್ರಧಾನಿ ನರೇಂದ್ರ ಮೋದಿ ಅವರು ಜು.26 ರಂದು ಸಂಜೆ 4.30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಕಸಿತ್ ವೈಬ್ರಂಟ್ ವಿಲೇಜ್-2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮವು ಸಮುದಾಯದ ಭಾಗವಹಿಸುವಿಕೆ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ರಾಷ್ಟ್ರೀಯ ಏಕೀಕರಣ, ಗಡಿ ಗ್ರಾಮಗಳ ಕಾರ್ಯತಂತ್ರದ ಪ್ರಾಮುಖ್ಯತೆಗೆ ನಿದರ್ಶನವಾಗಿದೆ ಎಂದು ವಿವರಿಸಿದರು.
ಗಡಿ ಗ್ರಾಮಗಳನ್ನು ರಾಷ್ಟ್ರದ ಮೊದಲ ಗ್ರಾಮಗಳಾಗಿ ಪರಿಗಣಿಸುವ ಮತ್ತು ವಿಕಸಿತ್ ಭಾರತದತ್ತ ಸಾಗುವ ಪ್ರಯಾಣದಲ್ಲಿ ಸಕ್ರಿಯವಾಗಿಸುವ ಪ್ರಧಾನಿ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮೈ ಭಾರತ್ ಮೂಲಕ ಜಾರಿಗೆ ತರಲಾದ ವಿಕಸಿತ್ ವೈಬ್ರಂಟ್ ವಿಲೇಜ್ ಕಾರ್ಯಕ್ರಮ ವಿಶಿಷ್ಟವಾಗಿದೆ.
-ಪ್ರಲ್ಹಾದ ಜೋಶಿ, ಕೇಂದ್ರ ಸಚಿವರು.
