ಮಹಾಲಿಂಗಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೬ನೇ ಜನ್ಮದಿನದ ಅಂಗವಾಗಿ ಬಿಜೆಪಿ ನಗರ ಘಟಕದ ವತಿಯಿಂದ ಗುರುವಾರ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಿಸುವ ಮೂಲಕ ಸೇವಾ ಸಂಕಲ್ಪದೊಂದಿಗೆ ಜನ್ಮದಿನ ಆಚರಿಸಲಾಯಿತು.
ಕಾರ್ಯಕರ್ತರು ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿ, ಹಾಲು ಮತ್ತು ಹಣ್ಣು ವಿತರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಆಚರಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನೇಕಾರರ ಮುಖಂಡ ಮನೋಹರ ಶಿರೋಳ ಮಾತನಾಡಿ, "ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಸೇವಾ ಸಂಕಲ್ಪ ಅಭಿಯಾನ ನಡೆಯುತ್ತಿದೆ. ಬಿಜೆಪಿ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಮಾಜ ಸೇವೆಯ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿವೆ. ಮೋದಿ ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ದೊರೆತು ದೇಶ ಸೇವೆಯನ್ನು ಇನ್ನಷ್ಟು ವರ್ಷ ಮುಂದುವರಿಸಲಿ ಎಂಬುದು ಎಲ್ಲರ ಆಶಯ" ಎಂದರು.
ಮಾಜಿ ಪುರಸಭೆ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ, "ಜನ್ಮದಿನದ ಸಂಭ್ರಮಕ್ಕಿಂತ ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದು ದೊಡ್ಡ ಸೇವೆ. ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಿಸುವ ಮೂಲಕ ಮಾನವೀಯತೆ ಮೆರೆದಿರುವುದು ಸಂತಸದ ಸಂಗತಿ. ಜನಸೇವೆಯೇ ನಿಜವಾದ ರಾಷ್ಟ್ರಸೇವೆ ಎಂಬ ಸಂಕಲ್ಪದೊಂದಿಗೆ ಇಂತಹ ಸಮಾಜಮುಖಿ ಕಾರ್ಯಗಳು ಮುಂದುವರಿಯಬೇಕು" ಎಂದು ಹೇಳಿದರು.ಈ ಸಂಧರ್ಭದಲ್ಲಿ ಬಿಜೆಪಿ ನಗರ ಮುಖಂಡರಾದ ಶಂಕರಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೊಳ್ಳಿ, ಭೀಮಶಿ ಗೌಂಡಿ, ವಿಷ್ಣುಗೌಡ ಪಾಟೀಲ, ಶಿವಾನಂದ ಅಂಗಡಿ, ಮಲ್ಲಪ್ಪ ದಲಾಲ, ಸಾಗರ ಮಠದ, ಶಿವನಗೌಡ ಪಾಟೀಲ, ಸಂತೋಷ ಜಂಬಗಿ, ಹರೀಶ ನಾಯಕ, ವೀರೇಶ ಮುಂಡಗನೂರ, ಮಹಾಲಿಂಗ ಬುದ್ನಿ, ಅಕ್ಷಯ ಜಲ್ಲಿ, ಮಹಾಲಿಂಗ ಶಿವಣಗಿ, ಜಗದೀಶ ಜಕ್ಕನ್ನವರ, ಬಸವರಾಜ ಮಡಿವಾಳ, ರವಿ ಗಿರಿಸಾಗರ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.