ಬಳ್ಳಾರಿ, ಸೆ.18: ಹಿಂದೂ ಮಹಾ ಗಣಪತಿ ಉತ್ಸವ-2026ರ ಅಂಗವಾಗಿ ಬಳ್ಳಾರಿ ನಗರದಲ್ಲಿ ಸೆ.20ರಂದು ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಉತ್ಸವದ ಕಾರ್ಯದರ್ಶಿ ಶರಣಪ್ಪ ಪಾಟೀಲ್ ತಿಳಿಸಿದರು.
ನಗರದ ಅನಂತಪುರ ರಸ್ತೆಯ ಸೆಂಟಿನರಿ ಹಾಲ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಭಜರಂಗದಳದ ವತಿಯಿಂದ ಸೆ.20ರ ಭಾನುವಾರ ಸಂಜೆ 4 ಗಂಟೆಗೆ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಸೆಂಟಿನರಿ ಹಾಲ್ನಿಂದ ಆರಂಭವಾಗುವ ಶೋಭಾಯಾತ್ರೆಯು ರಾಯಲ್ ಸರ್ಕಲ್, ಬ್ರೂಸ್ಪೇಟೆ, ಮೋತಿ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಬೆಂಗಳೂರು ರಸ್ತೆಯ ಕಾಲುವೆಗೆ ಸೇರಲಿದೆ, ಭವ್ಯ ಗಣೇಶ ಮೂರ್ತಿಯೊಂದಿಗೆ ನಡೆಯುವ ಶೋಭಾಯಾತ್ರೆ ಉತ್ಸವದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.
ಹಿಂದೂ ಮಹಾ ಗಣಪತಿ ಉತ್ಸವದ ಅಂಗವಾಗಿ ಅದೃಷ್ಟ ಗಣೇಶ ಲಕ್ಕಿ ಡ್ರಾ ಆಯೋಜಿಸಲಾಗಿದೆ. ಚಂದನ ಸ್ವರ್ಣ ಮಂದಿರ್ ವತಿಯಿಂದ ಭಕ್ತರಿಗಾಗಿ 21 ಗೋಲ್ಡ್ ಕೋಟೆಡ್ ಗಣೇಶ ಮೂರ್ತಿಗಳನ್ನು ಪ್ರಾಯೋಜಿಸಲಾಗಿದ್ದು, ಲಕ್ಕಿ ಡ್ರಾ ಮೂಲಕ ಆಯ್ಕೆಯಾಗುವ ವಿಜೇತರಿಗೆ ಈ ಮೂರ್ತಿಗಳನ್ನು ನೀಡಲಾಗುವುದು ಎಂದು ಶರಣಪ್ಪ ಪಾಟೀಲ್ ಹೇಳಿದರು.
ಶೋಭಾಯಾತ್ರೆಯಲ್ಲಿ ಗಣೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವದ ಸಂಭ್ರಮವನ್ನು ಹೆಚ್ಚಿಸಬೇಕು. ಶಾಂತಿ, ಶಿಸ್ತು ಹಾಗೂ ಸೌಹಾರ್ದತೆಯಿಂದ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ್ ಬುಜ್ಜಿ, ಮಲ್ಲಿಕಾರ್ಜುನ, ಬಿ.ಕೆ. ಗಾದಿಲಿಂಗಗೌಡ, ಸಾಗರ್, ಮಲ್ಲಿಕಾರ್ಜುನ್, ಕಾಶಿರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.