ವಿಜಯಪುರ, ಸೆ.೧೯: ಪ್ರಜಾಪ್ರಭುತ್ವದ ಬಲವರ್ಧನೆಗೆ ಯುವಜನರ ಪಾತ್ರ ಮಹತ್ವದ್ದಾಗಿದ್ದು, ೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಮತದಾನದ ಹಕ್ಕು ಚಲಾಯಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎ. ಉಪ್ಪಾರ ಕರೆ ನೀಡಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್ (ಇಎಲ್ಸಿ) ವತಿಯಿಂದ ಆಯೋಜಿಸಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-೨೦೨೬ ಹಾಗೂ ಯುವ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮತದಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಜವಾಬ್ದಾರಿಯಾಗಿದ್ದು, ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆ ಹಾಗೂ ಮತದಾನದ ಮಹತ್ವದ ಕುರಿತು ಅರಿವು ಹೊಂದಬೇಕು. ಚುನಾವಣಾ ಆಯೋಗದ ಸಂದೇಶ ಮತದಾರರ ಪಟ್ಟಿಯಿಂದ ಯಾರೂ ಹೊರ ಗುಳಿಯಬಾರದು (ನೊ ವೋಟರ್ ಲೆಪ್ಟ್ ಬಿ ಹೈಂಡ್ ) ಆಶಯದಂತೆ ಅರ್ಹತೆ ಹೊಂದಿರುವ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದು ತಿಳಿಸಿದರು. ಜಿಲ್ಲಾ ಇಎಲ್ಸಿ ನೋಡಲ್ ಅಧಿಕಾರಿ ಎಂ.ಬಿ. ರಜಪೂತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಆರ್) ಪ್ರಕ್ರಿಯೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ೧೮ ವರ್ಷ ಪೂರ್ಣಗೊಂಡ ಹಾಗೂ ನಿಗದಿತ ಅರ್ಹತಾ ದಿನಾಂಕದೊಳಗೆ ೧೮ ವರ್ಷ ಪೂರೈಸಲಿರುವವರು ನಮೂನೆ-೬ರ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳುವ ವಿಧಾನ ಹಾಗೂ ಸಿಟಿಜನ್ ಸರ್ವಿಸ್ ಫೊರ್ಟಲ್ ಹಾಗೂ ಮತ್ತು ಇಸಿಐ ನೆಟ್ ಆಪ್ ಬಳಕೆಯ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಚಾರ್ಯ ಪಿ.ಎ. ಮೇತ್ರಿ ಮಾತನಾಡಿ, ಮತದಾರರ ಸಾಕ್ಷರತೆ ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯವಾಗಿದ್ದು, ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಇತರರಲ್ಲಿಯೂ ಮತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಕಾಲೇಜಿನ ಸುಮಾರು ೩೦ ಅರ್ಹ ವಿದ್ಯಾರ್ಥಿಗಳ ನಮೂನೆ-೬ ಭರ್ತಿ ಮಾಡಿಸಿ ಸ್ಥಳದಲ್ಲಿಯೇ ನೋಂದಣಿ ಪ್ರಕ್ರಿಯೆ ಕೈಗೊಳ್ಳಲಾಯಿತು. ಹಿರಿಯ ಉಪನ್ಯಾಸಕರಾದ ಸಿ.ಟಿ.ಯಾಳಗಿ ಹಾಗೂ ಬಿ.ಎಸ್.ಗೌರಿ,ಎಸ್.ಸಿ. ತೋಳನೂರ,ಆರ್.ಸಿ. ಹಿರೇಮಠ,ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.