ಕಾಗವಾಡ: ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕನ್ನು ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಯುವ ಮುಖಂಡ ಜ್ಯೋತಿಕುಮಾರ ಪಾಟೀಲ ಸರ್ಕಾರವನ್ನು ಆಗ್ರಹಿಸಿದರು.
ಶನಿವಾರ ಕಾಗವಾಡ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಗವಾಡ ತಾಲೂಕು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಬಹುತೇಕ ಕುಟುಂಬಗಳ ಬದುಕು ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳನ್ನೇ ಅವಲಂಬಿಸಿದೆ. ಪ್ರಸಕ್ತ ವರ್ಷ ಸಮರ್ಪಕ ಮಳೆಯಾಗದ ಕಾರಣ ಬಿತ್ತನೆ ಮಾಡಿದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ತಾಲೂಕಿನ ಮಳೆಯ ಪ್ರಮಾಣ, ಬೆಳೆನಷ್ಟ, ಮಣ್ಣಿನ ತೇವಾಂಶ, ನೀರಿನ ಲಭ್ಯತೆ ಸೇರಿದಂತೆ ರೈತರ ನೈಜ ಪರಿಸ್ಥಿತಿಯನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಕ್ಷಣ ಜಂಟಿ ಸಮೀಕ್ಷೆ ನಡೆಸಿ ಪರಿಶೀಲಿಸಬೇಕು. ಬರ ಘೋಷಣೆಯ ಮಾನದಂಡಗಳನ್ನು ಆಧರಿಸಿ ಕಾಗವಾಡ ತಾಲೂಕನ್ನು ಕೂಡಲೇ ಬರಪೀಡಿತ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಸೆ.28ರಂದು ಕಾಗವಾಡ ಪಟ್ಟಣದಲ್ಲಿ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಜ್ಯೋತಿಕುಮಾರ ಪಾಟೀಲ ಎಚ್ಚರಿಕೆ ನೀಡಿದರು.
ಇನ್ನೋರ್ವ ಮುಖಂಡ ಚೇತನ ನಾಂದ್ರೆ ಮಾತನಾಡಿ, ರೈತರ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸದೆ ತಕ್ಷಣ ಸ್ಪಂದಿಸಬೇಕು. ಮಳೆಯ ಕೊರತೆಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ನೀಡಬೇಕು. ಕಾಗವಾಡ ತಾಲೂಕನ್ನು ಬರಪೀಡಿತ ಎಂದು ಘೋಷಿಸುವವರೆಗೆ ರೈತರು ಹಾಗೂ ವಿವಿಧ ಸಂಘಟನೆಗಳ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಕಾಕಾ ಪಾಟೀಲ, ಬಾಳು ಕಲ್ಲೋಳೆ, ಅಶೋಕ ಪಾಟೀಲ, ಶಿದ್ರಾಮ ಬಸ್ತವಾಡ, ಶೀತಲ, ಮಲ್ಲಿಕಾರ್ಜುನ ಕಾಂಬಳೆ, ಮಹಾಂತೇಶ ಬಡಿಗೇರ, ಪವನ ಪಾಟೀಲ, ಗಣೇಶ ಕೊಳೆಕರ, ಫಾರೂಕ್ ಅಲಸ್ಕಾರ, ಮುಸ್ತಾಕ ಜಮಾದಾರ, ಮಹಾವೀರ ಧೋಡಾರೆ, ಈಶ್ವರ ಪಾಟೀಲ, ನಿಲೇಶ ಬಾಡಗೆ, ಗೌರೇಶ ಪಾಟೀಲ, ಬಾಲಕೃಷ್ಣ ಬಂಜತ್ರಿ, ಬಾಬಾಸಾಬ ಕೊಟ್ಲಲಗಿ ಸೇರಿದಂತೆ ರೈತರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.