ಹುನಗುಂದ; ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಭುಗಲೆದ್ದ ಅಕ್ರಮ ಕಟ್ಟಡ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೆ) ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬುಧವಾರ ತಹಶೀಲ್ದಾರ ಮತ್ತು ಪಪಂ ಮುಖ್ಯಾಧಿಕಾರಿ ಭೇಟಿ ನೀಡಿ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸಿದರು.
ಧರಣಿಯಲ್ಲಿ ಪಾಲ್ಗೊಂಡ ಕರವೆ ಜಿಲ್ಲಾ ಅಧ್ಯಕ್ಷ ರಮ್ಜಾನ ನದಾಫ್ ಮಾತನಾಡಿ ನೀವು ಒದಗಿಸಿದ ದಾಖಲೆಗಳು ಅಪೂರ್ಣವಾಗಿವೆ. ಜೊತೆಗೆ ಕ್ರಮ ಕಟ್ಟಡಕ್ಕೆ ಮತ್ತು ದಾಖಲೆಗಳಿಗೆ ಯಾವುದೆ ಸಂಬಂಧವಿಲ್ಲ. ೨೦೦೧ರಿಂದ ಈಚೆಗೆ ಭುಗಿಲೆದ್ದ ಅಕ್ರಮ ಕಟ್ಟಡ ಬಗ್ಗೆ ಪೂರಕ ದಾಖಲೆಗಳನ್ನು ಒದಗಿಸಬೇಕು. ಆಸ್ತಿ ಹಂತ ಹಂತವಾಗಿ ಬದಲಾವಣೆಗೊಂಡ ಕುರಿತು ಆಯಾ ಇಸ್ವಿಯಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು ಕರೆಸಿ ಇಲ್ಲಿಯವರೆಗೆ ದಾಖಲೆಗಳನ್ನು ಪಡೆಯಬೇಕು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನಿ ಅಮಾನತ್ಗೊಳಿಸುವಂತೆ ಪ್ರತಿಭಟನೆಕಾರರು ಒತ್ತಾಯಿಸಿ ಪಟ್ಟು ಹಿಡಿದರು. ಸದರ್ ಆಸ್ತಿಗೆ ಸಂಬಂಧಪಟ್ಟಿ ಪಪಂ ದಲ್ಲಿರುವ ದಾಖಲೆಗಳು ಮತ್ತು ಲೊಕೊಪಯೋಗಿ ಇಲಾಖೆಯು ಸಂಬಂಧವಿರಬಹುದಾದ ದಾಖಲೆಗಳನ್ನು ಪಡೆದು ಇಂದು ಸಂಜೆಯವರೆಗೆ ನಮಗೆ ಒದಗಿಸಬೇಕು. ತಪ್ಪಿದಲ್ಲಿ ನಾಳೆ ಬುಧವಾರ ಹುನಗುಂದದಿಂದ ಪಾದಯಾತ್ರೆಯ ಮೂಲಕ ಬಾಗಲಕೋಟ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಅಲ್ಲಿ ಧರಣಿ ಮುಂದುವರೆಸಲಾಗುವದೆಂದು ರಮ್ಜಾನ್ ನದಾಫ್ ತಿಳಿಸಿದರು.
ನಂತರದಲ್ಲಿ ಅಧಿಕಾರಿಗಳ ಮತ್ತು ಕರವೆ ಕಾರ್ಯಕರ್ತರ ನಡುವೆ ವಾಗ್ವಾದ ಸೃಷ್ಟಿಯಾಯಿತು. ತಾಲೂಕ ಅಧ್ಯಕ್ಷ ರೋಹಿತ್ ಬಾರಕೇರ ಮಾತನಾಡಿ ಆಸ್ತಿ ಇತನಕ ನಡೆದು ಬಂದ ದಾರಿಯನ್ನು ಸಾರ್ವಜನಿಕರ ಮುಂದೆ ಒದಗಿಸುವಂತೆ ಕರವೆ ಆಗ್ರಹಿಸಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಮೀನಗಡ ಪಪಂ ಮುಖ್ಯಾಧಿಕಾರಿ ಎಸ್.ವೈ. ನವಲಪ್ಪನವರ ಮತ್ತು ಸಿಬ್ಬಂದಿ ಧರಣಿ ಸ್ಥಳಕ್ಕೆ ದಾಖಲೆ ಸಮೇತ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಹಾಗೂ ಮಾಹಿತಿ ಸಲ್ಲಿಸಿದಾಗ ದಾಖಲೆಗಳು ಸಂಪೂರ್ಣವಾಗಿಲ್ಲ ಹಾಗೂ ಹಲವು ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿಲ್ಲ ಎಂದು ಆರೋಪಿಸಿದರು. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ ಪ್ರಕ್ರಿಯೆ, ನಕ್ಷೆ ಮಂಜೂರಾತಿ, ತೆರಿಗೆ ದಾಖಲೆ ಹಾಗೂ ನಿಯಮಾನುಸಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪ?ನೆ ನೀಡುವಂತೆ ಬಾರಕೇರ ಒತ್ತಾಯಿಸಿದರು.
ಈ ವೇಳೆ ಅಧಿಕಾರಿಗಳು ನೀಡಿದ ಉತ್ತರ ತೃಪ್ತಿಕರವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸಿ ಕೆಲವರ ಪರವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂತು. ಅಕ್ರಮ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳುವುದನ್ನು ವಿಳಂಬ ಮಾಡುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಕರವೆ ಮುಖಂಡರು ಹೇಳಿದರು.
ಪಟ್ಟಣದ ಸಾರ್ವಜನಿಕ ರಸ್ತೆ, ಸಂಚಾರ ಹಾಗೂ ನಾಗರಿಕರ ಸುರಕ್ಷತೆಗೆ ಧಕ್ಕೆಯಾಗುವ ರೀತಿಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡದ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿ ಎಚ್ಚರಿಸಿದರು.
ಧರಣಿಯಲ್ಲಿ ವೀರಣ್ಣ ಬಡಿಗೇರ, ಅಶೋಕ ಪೂಜಾರ, ಶೋಭಾ ಅರಿಕೆ, ಹುಸೇನ್ ಸಂದಿಮನಿ, ಪ್ರವೀಣ ವಾಲೀಕಾರ, ಜಹಿರ ಸಂಗಮಕರ, ನಾಗರಾಜ ರಾಠೋಡ, ಹಸನ್ ಕಲಕಬಂಡಿ, ಮುತ್ತಣ್ಣ ಕಲಮಡಿ, ಸವಿತಾ ಹಿರೇಮಠ, ಕರವೆ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.
ಅಕ್ರಮ ಕಟ್ಟಡದ ವಿರುದ್ದ ಹೋರಾಟ ಕೈಗೊಂಡಿರುವ ಕೆಲವು ಕರವೆ ಕಾರ್ಯಕರ್ತರ ಮೇಲೆ ಕೆಲ ದುಷ್ಟ ಶಕ್ತಿಗಳು ದೌರ್ಜನ್ಯ ಮತ್ತು ದಬ್ಬಾಳಿಕೆ ಹಾಗೂ ಜೀವ ಬೆದರಿಕೆ ನಡೆಯುತ್ತಿದೆ. ನಮ್ಮ ಕಾರ್ಯಕರ್ತರಿಗೆ ಯಾವುದೆ ರೀತಿಯ ತೊಂದರೆಯಾದಲ್ಲಿ ಅದಕ್ಕೆ ಅಧಿಕಾರಿಗಳೆ ಹೊಣೆ. ಕರವೆ ಕರ್ಯಕರ್ತರು.
ಒಂದು ತಿಂಗಳ ಕಾಲಾವಕಾಶದಲ್ಲಿ ಈ ಆಸ್ತಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿಗಳನ್ನು ಕರೆಸಿ ಸೂಕ್ತ ಮಾಹಿತಿ ಪಡೆಯಲಾಗುವದು. ತಪ್ಪಿತಸ್ಥ ಅಧಿಕಾರಿಗಳು ಯಾರೆಂದು ಗೊತ್ತಾದಲ್ಲಿ ಅವರ ಮೇಲೆ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ತಿಳಿಸಲಾಗುವದು. ಅಲ್ಲಿಯವರೆಗೆ ಪ್ರತಿಭಟನೆ ಹಿಂಪಡೆಯಬೇಕು. ಪ್ರದೀಪಕುಮಾರ ಹಿರೇಮಠ ತಹಶೀಲ್ದಾರ.
