ಬಳ್ಳಾರಿ,ಜು.15 : ಜನಸಂಖ್ಯಾ ನಿಯಂತ್ರಣಕ್ಕೆ ಕೇವಲ ಸರ್ಕಾರಿ ಇಲಾಖೆಗಳು ಮಾತ್ರವಲ್ಲದೆ ಸಮುದಾಯವು ಸಕ್ರೀಯವಾಗಿ ಭಾಗವಹಿಸಿದರೆ ಮುಂಬರುವ ದಿನಗಳಲ್ಲಿ ದೇಶದ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೌಲ್ಬಜಾರ್ ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ನಮ್ಮ ದೇಶದ ಜನಸಂಖ್ಯೆ 147.6 ಕೋಟಿ ಹಾಗೂ ಕರ್ನಾಟಕದ ಜನಸಂಖ್ಯೆ 6.9 ಕೋಟಿಯನ್ನು ದಾಟಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿAದಾಗಿ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಎರಡು ಮಕ್ಕಳ ನಡುವೆ ಕನಿಷ್ಠ 3 ವರ್ಷಗಳ ಅಂತರ ಕಾಯ್ದುಕೊಳ್ಳುವ ಮೂಲಕ ಚಿಕ್ಕ ಸಂಸಾರಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಜನಸಂಖ್ಯೆ ನಿಯಂತ್ರಣದಲ್ಲಿ ಅಲ್ಪಮಟ್ಟಿನ ಸಾಧನೆ ಮಾಡಲಾಗಿದ್ದರೂ, ಸದ್ಯಕ್ಕೆ ‘ಜನಸಂಖ್ಯಾ ಸ್ಥಿರತೆ’ ಕಾಯ್ದುಕೊಳ್ಳುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಲವು ಉಚಿತ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
*ತಾತ್ಕಾಲಿಕ ವಿಧಾನಗಳು:*
ಮದುವೆಯಾದ ಮೊದಲ 2 ವರ್ಷಗಳವರೆಗೆ ಗರ್ಭಧಾರಣೆ ತಡೆಯಲು ತಾತ್ಕಾಲಿಕ ವಿಧಾನಗಳು, ಮೊದಲ ಮಗುವಿನ ನಂತರ 3 ವರ್ಷಗಳ ಅಂತರಕ್ಕಾಗಿ ‘ಮಾಲಾ' ಮತ್ತು 'ಛಾಯಾ' ಮಾತ್ರೆಗಳು.
*ಆಧುನಿಕ ಪದ್ಧತಿಗಳು:*
ಹೆರಿಗೆಯಾದ ತಕ್ಷಣ ಅಳವಡಿಸುವ ಪಿಪಿಐಯುಸಿಡಿ, 5 ರಿಂದ 10 ವರ್ಷಗಳ ಅವಧಿಗೆ ಐಯುಸಿಡಿ 375 ಮತ್ತು 380ಎ, ಹಾಗೂ ಮಹಿಳೆಯರಿಗಾಗಿ ಪ್ರತಿ 3 ತಿಂಗಳಿಗೊಮ್ಮೆ ನೀಡಲಾಗುವ ಅತ್ಯಂತ ಜನಪ್ರಿಯ ‘ಅಂತರ' ಚುಚ್ಚುಮದ್ದು. ಪುರುಷರಿಗಾಗಿ ‘ನಿರೋಧ್' ಸೇವೆಗಳು ಲಭ್ಯವಿವೆ.
*ಶಾಶ್ವತ ವಿಧಾನಗಳು:*
ಇನ್ನು ಮುಂದೆ ಮಕ್ಕಳು ಬೇಡವೆಂದು ನಿರ್ಧರಿಸಿದವರಿಗೆ ಮಹಿಳೆಯರಲ್ಲಿ ಲ್ಯಾಪ್ರೋಸ್ಕೋಪಿಕ್, ಟ್ಯುಬೆಕ್ಟಮಿ ಹಾಗೂ ಪುರುಷರಲ್ಲಿ ನೋ-ಸ್ಕಾಲ್ಪೆಲ್ ವ್ಯಾಸಕ್ಟಮಿ ಶಸ್ತçಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ.
ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಮಾತನಾಡಿ, ಹೆಣ್ಣು ಜೀವ ಉಳಿಸಿ ಸಾಮಾಜಿಕ ಜೀವನದಲ್ಲಿ ಹೆಣ್ಣಿಗೆ ಸಮಾನ ಸ್ಥಾನಮಾನ ನೀಡುವುದು ದೇಶದ ಅಭಿವೃದ್ಧಿಗೆ ಆಸ್ತಿಯಿದ್ದಂತೆ. ಈ ನಿಟ್ಟಿನಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ತಡೆಗೆ ಕಟ್ಟುನಿಟ್ಟಿನ ಜಾಗೃತಿ ಮೂಡಿಸಲಾಗುತ್ತಿದ್ದು, ‘ಬೇಟಿ ಬಚಾವೋ - ಬೇಟಿ ಪಡಾವೋ' ಆಂದೋಲನ ವ್ಯಾಪಕವಾಗಿ ನಡೆಯುತ್ತಿದೆ ಎಂದರು.
‘ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವಿನ ಆರೋಗ್ಯಕರ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವುದರೊಂದಿಗೆ ಅನಗತ್ಯ ಗರ್ಭಧಾರಣೆಗಳನ್ನು ತಡೆಗಟ್ಟಬಹುದು’ ಈ ವರ್ಷದ ಘೋಷಣೆಯಾಗಿದೆ ಎಂದು ತಿಳಿಸಿದರು.
ಬಾಲ್ಯ ವಿವಾಹ ತಡೆಗಟ್ಟುವುದು, ಹೆಣ್ಣಿಗೆ 18 ವರ್ಷ ಹಾಗೂ ಗಂಡಿಗೆ 21 ವರ್ಷ ತುಂಬಿದ ನಂತರವೇ ಮದುವೆ ಮಾಡುವುದು ಮತ್ತು ಕುಟುಂಬ ಯೋಜನೆಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಇಂದ್ರಾಣಿ .ವಿ., ಆಡಳಿತ ವೈದ್ಯಾಧಿಕಾರಿ ಡಾ.ಭಾರತಿ, ಸುರಕ್ಷಿತ ಗರ್ಭಪಾತ ಕಾರ್ಯಕ್ರಮದ ರಾಜ್ಯ ಕನ್ಸಲ್ಟೆಂಟ್ ದೊಡ್ಡನಗೌಡ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗನ್ನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಮಹಾದೇವಿ (ಎ.ಎಸ್.ಒ), ಹಿರಿಯ ಪ್ರಾಥಮಿಕ ಸುರಕ್ಷತಾ ಅಧಿಕಾರಿ ಮೇರಿ, ಆರೋಗ್ಯ ನಿರೀಕ್ಷಕ ಅರುಣ್ ಕುಮಾರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.