ಹುನಗುಂದ,ಜು,೦೬: ತಾಲೂಕಿನ ಇದ್ದಲಗಿ ಗ್ರಾಮ ಸೇರಿದಂತೆ ಹತ್ತು ಮುಳಗಡೆ ಗ್ರಾಮಗಳ ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಲಭ್ಯ ಕಲ್ಪಿಸುವುದು, ನಾಲ್ಕು ಗುಂಟೆ ನಿವೇಶನ ಮತ್ತು ಎರಡನೇ ಕಂತಿನ ಪರಿಹಾರ ಹಣ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಸಮಾಜ ಸೇವಕ ಹಾಗೂ ಎಸ್.ಆರ್.ಎನ್.ಇ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಸಂತ್ರಸ್ತರ ಧರಣಿಗೆ ನೈತಿಕ ಬೆಂಬಲ ಸೂಚಿಸಿದರು.
ಈ ವೇಳೆ ಎಸ್.ಆರ್ ನವಲಿಹಿರೇಮಠ ಮಾತನಾಡಿ ಕಳೆದ ೧೯ ವರ್ಷಗಳಿಂದ ತಗಡಿನ ಶೆಡ್ಡಿನಲ್ಲಿ ಅನುಭವಿಸುತ್ತಿರುವ ಸಂತ್ರಸ್ತರ ಸಂಕಷ್ಟಗಳನ್ನು ಪರಿಹರಿಸದೇ ಇರುವರು ಮತ್ತು ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳದವ ನಿಜವಾದ ಜನಪ್ರತಿನಿಧಿ ಅಲ್ಲವೇ ಅಲ್ಲ. ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬಗಳಿಗೆ ಸರ್ಕಾರ ಕೊಟ್ಟ ಒಂದು ಗುಂಟೆ ಜಾಗೆ ಸಾಕಾಗದು. ಸಂತ್ರಸ್ತರು ಕೇಳುತ್ತಿರುವ ನಾಲ್ಕು ಗುಂಟೆ ನಿವೇಶನದ ಬೇಡಿಕೆ ನ್ಯಾಯಯುತವಾಗಿದೆ.
ಕೃಷ್ಣ ಮತ್ತು ಮಲಪ್ರಭಾ ನದಿಗಳ ದಡದಲ್ಲಿರುವ ೪೦ಕ್ಕೂ ಹೆಚ್ಚು ಹಳ್ಳಿಗಳು ಯುಕೆಪಿ ಅಡಿಯಲ್ಲಿ ಮುಳಗಡೆಯಾಗಬೇಕಿತ್ತು.ಆದರೆ ಸಧ್ಯ ೩೪ ಹಳ್ಳಿಗಳು ಮಾತ್ರ ಯುಕೆಪಿಯಡಿಯಲ್ಲಿ ಮುಳಗಡೆಯಾಗಿವೆ. ಇನ್ನು ೧೧ಕ್ಕೂ ಹೆಚ್ಚು ಹಳ್ಳಿಗಳ ಜನರು ಇನ್ನು ಪಡಬಾರದ ಕಷ್ಟ ಪಡುತ್ತಿದ್ದಾರೆ.೪೦ ಗ್ರಾಮಗಳ ಜನರು ಸೇರಿಕೊಂಡು ಒಂದು ಕಮೀಟಿ ರಚಿಸಿ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡಿ ಎಂದರು.
ಈ ಸಂದರ್ಭದಲ್ಲಿ ಮಹಾಂತೇಶ ನಾಡಗೌಡರ, ಹಸನಸಾಬ ಪಿಂಜಾರ ಅವರು ಹತ್ತು ಗ್ರಾಮಗಳ ಸಂತ್ರಸ್ತರ ಬೇಡಿಕೆ ಕುರಿತು ಮಾತನಾಡಿದರು.
ಹಿರಿಯ ಸಹಕಾರಿ ಧುರೀಣ ಎಲ್.ಎಮ್.ಪಾಟೀಲ, ಮಹಾಂತೇಶ ಮೂಲಿಮನಿ, ನಿಂಗನಗೌಡ ಜಾಲಿಹಾಳ,ಭೀಮಣ್ಣ ಶಿರೂರ, ಮಹಾಂತೇಶ ಚೌಡಾಪುರ, ರವಿ ಬಾನಿ, ಜಗದೀಶ ಹೊಸಮನಿ, ಷಡಕ್ಷರಯ್ಯ ಹಿರೇಮಠ, ಮಲ್ಲಣ್ಣ ಕಮರಿ ಸೇರಿದಂತೆ ಹತ್ತು ಮುಳುಗಡೆ ಗ್ರಾಮಗಳ ಸಂತ್ರಸ್ತರು ಇದ್ದರು.
ಬಾಕ್ಸ್; ಸಂತ್ರಸ್ತರು ವಿಧಾನಸೌಧ ಮುತ್ತಿಗೆ ಹಾಕಿದಾಗ ಮಾತ್ರ ಬೇಡಿಕೆಗಳು ಈಡೇರಲು ಸಾಧ್ಯ ***ಇದ್ದಲಗಿ ಗ್ರಾಮ ಸೇರಿದಂತೆ ಹತ್ತು ಹಳ್ಳಿಗಳ ಸಂತ್ರಸ್ತರು ೫೯ ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಕುರಿತು ತಾಲೂಕಿನ ೪೦ ಗ್ರಾಮಗಳ ಸಂತ್ರಸ್ತರನ್ನು ಕರೆದುಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಜಲಸಂಪನ್ಮೂಲ ಸಚಿವರಿಗೆ ಮತ್ತು ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ರಾಜ್ಯದ ಮುಖ್ಯಮಂತ್ರಿಗಳಿಗೆ ತಲುಪಿಸಿ ಬೇಡಿಕೆ ಈಡೇರಿಕೆಗೆ ೨೦ ದಿನಗಳ ಗಡುವು ನೀಡಿ, ಅಷ್ಟರಲ್ಲಿ ಬೇಡಿಕೆ ಈಡೇರದಿದ್ದರೆ ೪೦ ಹಳ್ಳಿಯ ಜನರು ವಿಧಾನಸಭೆ ಮುತ್ತಿಗೆ ಹಾಕುವ ಕೆಲಸವಾಗಲಿ. ಸರ್ಕಾರ ಬಜೆಟನಲ್ಲಿ ಅನುದಾನ ಮೀಸಲಿಟ್ಟರೆ ಮಾತ್ರ ನಿಮ್ಮಗಳ ಬೇಡಿಕೆಗಳು ಈಡೇರಲು ಸಾಧ್ಯ. ನೀವು ವಿಧಾನಸಭೆ ಮುತ್ತಿಗೆ ಹಾಕಲು ಹೋಗಲು ನಿರ್ದಾರ ಕೈಗೊಂಡರೆ ಅದಕ್ಕೆ ಬೇಕಾದ ವಾಹನ ವ್ಯವಸ್ಥೆ ಮತ್ತು ಊಟೋಪಚಾರ ಮಾಡಿಸಲು ನಾನು ಮಾಡುತ್ತೇನೆ. ಎಸ್.ಆರ್.ನವಲಿಹಿರೇಮಠ.ಅಧ್ಯಕ್ಷರು, ಎಆರ್ಎನ್ಇ ಫೌಂಡೇಶನ್ ಹುನಗುಂದ.
