ನವದೆಹಲಿ,
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮೇ 3 ರಂದು ನಡೆದಿದ್ದ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ, ರದ್ದಾದ ದಿನದಿಂದ ಈವರೆಗೆ ದೇಶಾದ್ಯಂತ ಒಟ್ಟು 4 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಲ್ಲಿ ಒಬ್ಬ ಬೆಂಗಳೂರಿನ ವಿದ್ಯಾರ್ಥಿಯೂ ಇದ್ದಾರೆ.
ಸಾಕಷ್ಟು ಶ್ರಮವಹಿಸಿದ ಬರೆದ ಪರೀಕ್ಷೆ ರದ್ದಾಗಿ, ಮತ್ತೆ ಪರೀಕ್ಷೆ ಬರೆಯಬೇಕಾದ ಒತ್ತಡ, ಖಿನ್ನತೆಗೊಳಗಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ ವಿದ್ಯಾರ್ಥಿಗಳ ಸಾವಿನ ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಮೋದಿ ಸರ್ಕಾರದ ಅಮೃತ ಕಾಲ ವಿದ್ಯಾರ್ಥಿಗಳ ಪಾಲಿಗೆ ಮೃತಕಾಲವಾಗಿ ಪರಿಣಮಿಸಿದೆ. ಘಟನೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಖಾತೆ ಸಚಿವ ಧರೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ನಾಲ್ಕು ಸಾವು:
ಮೇ 3ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಭಾಗಿಯಾಗಿ ಉತ್ತಮ ಅಂಕದ ನಿರೀಕ್ಷೆಯಲ್ಲಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ಗೋವಾದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಶನಿವಾರ ಬೆಳಕಿಗೆ ಬಂದಿದೆ. ಈ ನಡುವೆ ರಾಜಸ್ಥಾನ ಮೂಲದ ಪ್ರದೀಪ್ ಮೇಘ್ವಾಲ್ ಎಂಬ ವಿದ್ಯಾರ್ಥಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಪರೀಕ್ಷೆಯಲ್ಲಿ 720ಕ್ಕೆ 650 ಅಂಕದ ನಿರೀಕ್ಷೆಯಲ್ಲಿದ್ದ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ, ಮರು ಪರೀಕ್ಷೆ ನಿಗದಿಯಿಂದ ಖಿನ್ನತೆಗೆ ಒಳಗಾಗಿ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ ಎನ್ನಲಾಗಿದೆ. ಇನ್ನು ಶುಕ್ರವಾರ ದೆಹಲಿಯಲ್ಲಿ ಅನ್ಷಿಕಾ ಪಾಂಡೆ, ಉತ್ತರ ಪ್ರದೇಶದಲ್ಲಿ ರಿತಿಕಾ ಮಿಶ್ರಾ ಎನ್ನುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಧ್ಯಾಪಕಿ ಅರೆಸ್ಟ್;
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಸಾಯನಶಾಸ್ತ್ರ ಅಧ್ಯಾಪಕನನ್ನು ಬಂಧಿಸಿದ್ದ ಸಿಬಿಐ, ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್ಟಿಎ) ಭಾಗವಾಗಿದ್ದ ಜೀವಶಾಸ್ತ್ರ ಪ್ರಾಧ್ಯಾಪಕಿಯನ್ನು ಬಂಧಿಸಿದೆ.
ಮೋದಿ ಸರ್ಕಾರದ ಅಮೃತ ಕಾಲ ವಿದ್ಯಾರ್ಥಿಗಳ ಪಾಲಿಗೆ ಮೃತಕಾಲವಾಗಿ ಪರಿಣಮಿಸಿದೆ. ಘಟನೆಯ ಹೊಣೆ ಹೊತ್ತು ಶಿಕ್ಷಣ ಖಾತೆ ಸಚಿವ ಧರ್ಮೇಂಧ್ರ ಪ್ರಧಾನ್ ರಾಜೀನಾಮೆ ನೀಡಬೇಕು.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
