ಮಿರ್ಯಾಲಗುಡ (ತೆಲಂಗಾಣ):
ಕೊಳವೆಬಾವಿ ಪಕ್ಕದ ಗುಂಡಿಗೆ ಬಿದ್ದಿದ್ದ ಮೊಮ್ಮಗನ ರಕ್ಷಣೆಗೆ ಹೋದ ತಾತ ಸಾವನ್ನಪ್ಪಿರುವ ದುರ್ಘಟನೆ ನಲ್ಗೊಂಡ ಜಿಲ್ಲೆಯ ಮಿರ್ಯಾಲಗುಡ ತಾಲೂಕಿನಲ್ಲಿ ಶನಿವಾರ ನಡೆದಿದೆ.
ಮೊಮ್ಮಗನ ರಕ್ಷಿಸಲು ಮುಂದಾಗಿದ್ದ ಅಜ್ಜ ಕೊಳವೆಬಾವಿ ಪಕ್ಕದ ಗುಂಡಿಗೆ ಸಿಲುಕಿ ಅಸುನೀಗಿದ್ದಾರೆ. ಬಳಿಕ ಇದನ್ನು ಕಣ್ಣಾರೆ ಕಂಡ ಮೊಮ್ಮಗಳು ದೂರ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ನಂತರ ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಬೋರ್ವೆಲ್ ಪಕ್ಕದ 10 ಅಡಿ ಆಳದ ಗುಂಡಿಗೆ ಬಿದ್ದಿದ್ದ ಬಾಲಕನನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ.
ಸ್ಥಳೀಯರು ಮತ್ತು ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಯಾದಗರಪಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕಾಂತು ನಾಗಮ್ಮ ಅವರ ಪತಿ ವೆಂಕಣ್ಣ (53) ಮೃತರು. ಇವರ ಹಿರಿಯ ಮಗಳು ತನ್ನ ಇಬ್ಬರು ಮಕ್ಕಳಾದ ಲೋಹಿತಾ(6) ಮತ್ತು ಹೇಮಾಂಶ್(5) ಜೊತೆ ಮೂರು ದಿನಗಳ ಹಿಂದೆ ತವರಿಗೆ ಬಂದಿದ್ದರು. ಶನಿವಾರ ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದಿದ್ದು ಹೇಗೆ:
ಶನಿವಾರ ಬೆಳಗ್ಗೆ 8:15 ಕ್ಕೆ, ವೆಂಕಣ್ಣ ತನ್ನ ಮೊಮ್ಮಗ ಮತ್ತು ಮೊಮ್ಮಗಳನ್ನು ಕರೆದುಕೊಂಡು ಮರಗಳಿಗೆ ನೀರುಣಿಸಲು ಗ್ರಾಮದ ಹೊರವಲಯದಲ್ಲಿರುವ ಹೊಲಕ್ಕೆ ತೆರಳಿದ್ದರು. ಅಲ್ಲಿ ಆಟವಾಡುತ್ತಿದ್ದ ಹೇಮಾಂಶ್, ಬೆಳಗ್ಗೆ 8.30 ಕ್ಕೆ ಬೋರ್ವೆಲ್ನ ಕೇಸಿಂಗ್ ಪೈಪ್ ಸುತ್ತಲೂ ಮಣ್ಣು ಕುಸಿದು ರೂಪುಗೊಂಡ 10 ಅಡಿ ಆಳದ ಗುಂಡಿಗೆ ಬಿದ್ದಿದ್ದ. ಇದನ್ನು ಗಮನಿಸಿದ ವೆಂಕಣ್ಣ ತಕ್ಷಣ, ತನ್ನ ಮೊಮ್ಮಗನನ್ನು ಹೊರತೆಗೆಯಲು ಗುಂಡಿಯೊಳಗೆ ತನ್ನ ತಲೆಯನ್ನು ಹಾಕಿದರು. ಅನಿರೀಕ್ಷಿತವಾಗಿ, ಅವರೂ ಕೂಡ ಅದರಲ್ಲಿ ಜಾರಿಬಿದ್ದರು.
ಈ ಅಪಾಯವನ್ನು ಅರಿತ ಮೊಮ್ಮಗಳು ಲೋಹಿತಾ, ಕೊಳವೆಬಾವಿಯತ್ತ ಹೋಗದೆ ಸುಮಾರು ಒಂದು ಕಿಲೋಮೀಟರ್ ಓಡಿ ರಸ್ತೆಯಲ್ಲಿರುವವರಿಗೆ ಮಾಹಿತಿ ನೀಡಿದ್ದಳು. ಸ್ಥಳೀಯರು ಬೆಳಗ್ಗೆ 9 ಗಂಟೆ ಸುಮಾರಿಗೆ ಹೊಲವನ್ನು ತಲುಪಿದ್ದರು. ಹೆಚ್ಚಿನ ಜನರು ಹತ್ತಿರ ಹೋದರೆ, ಗುಂಡಿ ಮತ್ತಷ್ಟು ಕುಸಿಯುವ ಭೀತಿ ಇತ್ತು. ತಾತ ಮತ್ತು ಮೊಮ್ಮಗ ಒಳಗೆ ಸಿಲುಕಿಕೊಂಡಿದ್ದು ಅವರ ಜೀವಗಳು ಅಪಾಯದಲ್ಲಿವೆ, ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಅವರು ಹಿಂಜರಿದರು.
ಈ ಮಧ್ಯೆ, ಗ್ರಾಮೀಣ ಸಬ್-ಇನ್ಸ್ಪೆಕ್ಟರ್ ಲಕ್ಷ್ಮಯ್ಯ ಸ್ಥಳಕ್ಕೆ ದೌಡಾಯಿಸಿದರು. ಘಟನೆ ನಡೆದು ಬಹಳ ಸಮಯವಾಗಿದ್ದರಿಂದ ಎಲ್ಲರೂ ಚಿಂತಿತರಾಗಿದ್ದರು. ಸ್ಥಳೀಯ ಯುವಕ ಸೈದುಲು ಬೆಳಗ್ಗೆ 10:30ಕ್ಕೆ ವೆಂಕಣ್ಣನ ಸೊಂಟಕ್ಕೆ ಹಗ್ಗ ಕಟ್ಟಿ ಕೊಳವೆಬಾವಿ ಪಕ್ಕದ ಹೊರತರಲು ಧೈರ್ಯ ಮಾಡಿದರು. ಮೊದಲಿಗೆ ವೆಂಕಣ್ಣನನ್ನು ಹರಸಾಹಸ ಪಟ್ಟು ಹೊರತೆಗೆಯಲಾಯಿತು. ತಕ್ಷಣಕ್ಕೆ ಅವರಿಗೆ ಸಿಪಿಆರ್ ಮಾಡಿ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದ್ರೆ ಅಷ್ಟರಲ್ಲಿ ವೆಂಕಣ್ಣ ಕೊನೆಯುಸಿರೆಳೆದರು.
ಈ ಮಧ್ಯೆ, ಮತ್ತೊಮ್ಮೆ ಬೋರ್ವೆಲ್ಗೆ ಇಳಿದ ಸೈದುಲು, ಬೆಳಗ್ಗೆ 10:45 ಕ್ಕೆ ಬಾಲಕ ಹೇಮಾಂಶ್ನನ್ನು ಹೊರತೆಗೆದರು. ನಂತರ, ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಮಿರ್ಯಾಲಗುಡ ಡಿಎಸ್ಪಿ ರಾಜಶೇಖರ ರಾಜು, ಗ್ರಾಮೀಣ ಸಿಐ ಪಿಎನ್ಡಿ ಪ್ರಸಾದ್, ಅಗ್ನಿಶಾಮಕ ಅಧಿಕಾರಿ ಯಾದಗಿರಿ ಮತ್ತು ತಹಶಿಲ್ದಾರ್ ಶ್ರೀನಿವಾಸ್ ಸ್ಥಳಕ್ಕೆ ತಲುಪಿದರು.
''ವೆಂಕಣ್ಣ ತನ್ನ ಮೊಮ್ಮಗಳು ಮತ್ತು ಮೊಮ್ಮಗನನ್ನು ಕೃಷಿ ಜಮೀನಿಗೆ ಕರೆದೊಯ್ದಿದ್ದರು. ಅಲ್ಲಿ, ಮೊಮ್ಮಗ ಕೊಳವೆ ಬಾವಿಯ ಬಳಿ ಆಟವಾಡುತ್ತಿದ್ದ. ಕೊಳವೆ ಬಾವಿಯಲ್ಲಿ ಮಣ್ಣು ಮೃದುವಾಗಿತ್ತು, ಹಾಗಾಗಿ ಇದ್ದಕ್ಕಿದ್ದಂತೆ ನೀರು ಬಂದು ಐದು ವರ್ಷದ ಬಾಲಕ ಕೊಳವೆಬಾವಿ ಪಕ್ಕದ ಗುಂಡಿಗೆ ಬಿದ್ದನು. "ಮೊಮ್ಮಗನನ್ನು ಉಳಿಸಲು ಅಜ್ಜ ಮುಂದಾಗಿ ತಲೆ ಕೆಳಗಾಗಿ ಮಾಡಿ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದರು." ಎಂದು ಮಿರ್ಯಾಲಗುಡ ಡಿಎಸ್ಪಿ ರಾಜಶೇಖರ್ ಮಾಹಿತಿ ನೀಡಿದರು.
