ಮುದ್ದೇಬಿಹಾಳ, ಜು. 2: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಬುಧವಾರ ಹುಡಕೋ ಬಡಾವಣೆಯ ಶ್ರೀ ಪಂಜುರ್ಲಿ ಹೋಟೆಲ್ನಲ್ಲಿ ಮುದ್ದೇಬಿಹಾಳ ತಾಲೂಕಿನ ಎಲ್ಲ ವೈದ್ಯರು ಸೇರಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ವೈದ್ಯರಾದ ಡಾ. ಎಸ್. ಬಿ. ನಾಗೂರ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸಹೊಸ ರೋಗಗಳು, ಲಸಿಕಾಕರಣದ ಮಹತ್ವ ಹಾಗೂ ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಜವಾಬ್ದಾರಿಯ ಕುರಿತು ಯುವ ವೈದ್ಯರಿಗೆ ಮಾರ್ಗದರ್ಶನ ನೀಡಿದರು.
AFI ಅಧ್ಯಕ್ಷರಾದ ಡಾ. ವೀರೇಶ ಬಾ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ವೈದ್ಯಕೀಯ ಕ್ಷೇತ್ರದ ಬೆಳವಣಿಗೆ, ಭಾರತ ರತ್ನ ಡಾ. ಬಿ. ಸಿ. ರಾಯ್ ಅವರ ಜೀವನ ಸಾಧನೆ, ಸಮಾಜಸೇವೆ ಹಾಗೂ ಈ ವರ್ಷದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಘೋಷವಾಕ್ಯದ ಕುರಿತು ವಿವರಿಸಿದರು.
IMA ಕಾರ್ಯದರ್ಶಿಗಳಾದ ಡಾ. ವಿ. ಎಂ. ಬಿರಾದಾರ ಮಾತನಾಡಿ, ಸಮಾಜದ ಆರೋಗ್ಯ ಕಾಪಾಡುವ ವೈದ್ಯರಿಗೆ ಸಮಾಜದಿಂದಲೂ ಗೌರವ ಮತ್ತು ಸಹಕಾರ ದೊರೆಯುವುದು ಅತ್ಯಗತ್ಯ ಎಂದು ತಿಳಿಸಿದರು.
AFI ಕಾರ್ಯದರ್ಶಿಗಳಾದ ಡಾ. ವೀರಣ್ಣ ಚ. ಇಟಗಿ ಅವರು ವೈದ್ಯಕೀಯ ವೃತ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವೈದ್ಯರು ಎದುರಿಸುತ್ತಿರುವ ಕಾನೂನು ಸಂಬಂಧಿತ ಸವಾಲುಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವೈದ್ಯರ ಕುಟುಂಬದ ಸದಸ್ಯರಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹೊಸದಾಗಿ ವೈದ್ಯಕೀಯ ವೃತ್ತಿ ಆರಂಭಿಸಿದ ವೈದ್ಯರನ್ನು ಪರಿಚಯಿಸಿ ಗೌರವಿಸಲಾಯಿತು.
ಜಿಲ್ಲಾ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ಡಾ. ಎ. ಎಂ. ಮುಲ್ಲಾ ಅವರಿಗೆ "ವೈದ್ಯರತ್ನ" ಪ್ರಶಸ್ತಿ, ಮಕ್ಕಳ ತಜ್ಞರಾದ ಡಾ. ಪರಶುರಾಮ್ ವಡ್ಡರ್ ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಲಭಿಸಿದ್ದಕ್ಕಾಗಿ ಸನ್ಮಾನಿಸಲಾಯಿತು. ಅಲ್ಲದೆ ನಾಲತವಾಡದ ವೈದ್ಯರಾದ ಡಾ. ರಾಜೇಂದ್ರ ಗಲಗಲಿ ಹಾಗೂ ಡಾ. ರಂಗನಾಥ ವೈದ್ಯ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ತಾಲೂಕು ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಡಿ. ಬಿ. ಒಸ್ವಾಲ್, ಡಾ. ಜಿ. ಕೆ. ಹೊಕ್ರಾಣಿ, ಡಾ. ಪಿ. ಬಿ. ಇಳಕಲ್, ಡಾ. ಎಸ್. ಐ. ಜಲ್ಪಿ, ಡಾ. ಎಸ್. ಬಿ. ವಡವಾಡಗಿ, ಡಾ. ಉತ್ಕರ್ಷ ನಾಗೂರ, ಡಾ. ಪಲ್ಲವಿ ನಾಗೂರ, ಡಾ. ಗೀತಾ ಪಾಟೀಲ್, ಡಾ. ಶೋಭಾ ಇಟಗಿ, ಡಾ. ವಿಶ್ವಜಿತ್ ಕೋರಿ, ಡಾ. ಪೂಜಾ ಕೋರಿ, ಡಾ. ಎಸ್. ಆರ್. ಪಾಟೀಲ್, ಡಾ. ವಿಜಯಕುಮಾರ್ ಗೂಳಿ ಸೇರಿದಂತೆ ತಾಲೂಕಿನ ಅನೇಕ ವೈದ್ಯರು ಹಾಗೂ ಅವರ ಕುಟುಂಬದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ. ಆರ್. ಎಸ್. ಮಸೂತಿ ಹಾಗೂ ಡಾ. ಬಸವರಾಜ ಮುತ್ತತ್ತಿ ನಡೆಸಿದರು. ಡಾ. ಸಿ. ಕೆ. ಶಿವಯೋಗಿಮಠ ಸ್ವಾಗತಿಸಿದರು. ಡಾ. ರಾಜೇಶ್ವರಿ ಗೂಳಿ ಪ್ರಾರ್ಥನೆ ನೆರವೇರಿಸಿದರು. ಕೊನೆಯಲ್ಲಿ ಡಾ. ಎಂ. ಎಂ. ಹಿರೇಮಠ ವಂದನಾರ್ಪಣೆ ಸಲ್ಲಿಸಿದರು.
