ಇಂಡಿ: ವಚನ ಸಾಹಿತ್ಯದ ಜತೆಗೆ ಪತ್ರಿಕಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಫ.ಗು. ಹಳಕಟ್ಟಿ ಅವರ ಬದುಕು ನಮಗೆಲ್ಲ ಪ್ರೇರಣೆ. ವೈಯಕ್ತಿಕ ಜೀವನ ಬದಿಗಿರಿಸಿ ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಂಡ ಆದರ್ಶ ವ್ಯಕ್ತಿ’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ವಕೀಲ ವೃತ್ತಿ ಬಿಟ್ಟ ಹಳಕಟ್ಟಿ ಅವರು ಸೈಕಲ್ ಏರಿ ಊರೂರು ಸುತ್ತಿ, ತಾಳೆ ಗರಿ, ಓಲೆಕಟ್ಟನ್ನು ಸಂಗ್ರಹಿಸಿ ಪುಸ್ತಕ ಮುದ್ರಣಕ್ಕೆ ಮುಂದಾಗಿ ಆರ್ಥಿಕ ತೊಂದರೆ ಲೆಕ್ಕಿಸದೇ ವಚನ ಸಾಹಿತ್ಯ ಸಂರಕ್ಷಣೆಗೆ ಬದುಕನ್ನು ಮುಡಿಪಾಗಿಟ್ಟ ಅವರು ಇಂದಿನ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.
ಹಳಕಟ್ಟಿ ಅವರದು ವೈವಿಧ್ಯಮಯ ವ್ಯಕ್ತಿತ್ವ. ಶಿಕ್ಷಣ, ಸಾಹಿತ್ಯ, ಸಹಕಾರ ಕ್ಷೇತ್ರಗಳಿಂದ ಬಾಳು ಬಂಗಾರ ಎಂದು ತಿಳಿದವರು. ಕನ್ನಡ ಮತ್ತು ಕರ್ನಾಟಕ ಅವರ ಜೀವನದ ಉಸಿರಾಗಿತ್ತು. ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನವನ್ನು ಶೋಧಿಸಿ, ಅನ್ವೇಷಿಸಿ, ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಸಾಹಿತ್ಯವನ್ನು ಸಂರಕ್ಷಿಸಿ ಜನಮನಕ್ಕೆ ತಲುಪಿಸುವಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಕೊಡುಗೆ ಅಪಾರ. ಇಂದು ವಚನ ಸಾಹಿತ್ಯ ದೊಡ್ಡಮಟ್ಟದಲ್ಲಿ ಪ್ರಚಾರವಾಗಿರುವುದಕ್ಕೆ ಹಳಕಟ್ಟಿ ಅವರೇ ಪ್ರಮುಖ ಕಾರಣ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಜೆ ಸಿ ಗುಣಕಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ಮಕ್ಕಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕೆಜಿಎಸ್ ಶಾಲೆಯ ನಿವೃತ್ತ ಶಿಕ್ಷಕಿ ಎಸ್ ಎನ್ ಡಂಗಿ ಅವರನ್ನು ಸನ್ಮಾನಿಸಲಾಯಿತು.
