ಚೆನ್ನೈ (ತಮಿಳುನಾಡು):
ಸನಾತನ ಧರ್ಮ ತಮ್ಮ ಹೇಳಿಕೆ ಕುರಿತು ಬರುವ ಯಾವುದೇ ಟೀಕೆಗಳಿಗೂ ತಾವು ಹೆದರುವುದಿಲ್ಲ ಎಂದು ತಮಿಳುನಾಡು ವಿಧಾನಸಭಾ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ ತಮ್ಮ ಚೊಚ್ಚಲ ಭಾಷಣ ಮಾಡಿದ ಉದಯನಿಧಿ ಸ್ಟಾಲಿನ್, ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರಿ ಖಂಡನೆ ವ್ಯಕ್ತವಾಗಿತ್ತು.
ತಮ್ಮ ಈ ನಿಲುವಿನ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸ್ಪಷ್ಟನೆ ನೀಡಿರುವ ಉದಯನಿಧಿ ಸ್ಟಾಲಿನ್, ಜನರನ್ನು ವಿಭಜಿಸುವ ಸನಾತನ ನಿರ್ಮೂಲನೆ ಮಾಡಬೇಕು ಎಂಬ ತಮ್ಮ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಈ ಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನು ಅಲ್ಲ. ದ್ರಾವಿಡ ಚಳವಳಿಯ ವಿರೋಧದ ನಡುವೆಯೇ ಬೆಳೆದು ಬಂದಿರುವ ವ್ಯಕ್ತಿ ನಾನು. ಈ ಕುರಿತು ಸಂಕ್ಷಿಪ್ತ ಸ್ಪಷ್ಟೀಕರಣವನ್ನು ನೀಡಲು ಬಯಸುತ್ತೇನೆ.
ಸನಾತನ ಧರ್ಮ ನಿರ್ಮೂಲನೆ ಎಂಬುದು ಮೇಲ್ಜಾತಿ ಮತ್ತು ಕೆಳಜಾತಿ ಎಂದು ವಿಭಜಿಸುವ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂಬದಾಗಿದೆ. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎನ್ನುವುದರ ಅರ್ಥ ಯಾರು ದೇವಸ್ಥಾನಕ್ಕೆ ಹೋಗುವುದು ಬೇಡ ಎಂದು ಅಲ್ಲ. ಬದಲಾಗಿ ಹೋಗಲು ಸಮಾನ ಅವಕಾಶ ಇರಬೇಕು ಎಂಬುದಾಗಿದೆ. ಕೇವಲ ದೇಗುಲ ಮಾತ್ರವಲ್ಲ ಸಮಾಜದಲ್ಲೂ ಸಮಾನ ಅವಕಾಶ ಇರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಪೆರಿಯಾರ್, ಅಂಬೇಡ್ಕರ್, ಅಣ್ಣಾ ಮತ್ತು ಕಲೈನಾರ್ ಅವರು ಹೇಳಿದ ತತ್ವಗಳ ಬಗ್ಗೆಯೂ ನಾನು ಮಾತನಾಡಿದ್ದೇನೆ. ದೇವರಲ್ಲಿ ಯಾರ ನಂಬಿಕೆಗೂ ನಾವು ವಿರೋಧಿಯಲ್ಲ. ಆದರೆ ಅಸಮಾನತೆ ಮತ್ತು ದಬ್ಬಾಳಿಕೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ನಾವು ಅಸಮಾನತೆ ಮತ್ತು ದಬ್ಬಾಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ವಳ್ಳುವರ್ ಘೋಷಿಸಿದಂತೆ, ಹುಟ್ಟಿನಿಂದ ಎಲ್ಲಾ ಜೀವಗಳು ಸಮಾನ. ಅದು ನಮ್ಮ ಮಾರ್ಗದರ್ಶಿ ಎಂದು ತಿಳಿಸಿದ್ದಾರೆ. ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಇದೇ ಮೊದಲ ಬಾರಿಗೆ ಹೇಳಿಕೆ ನೀಡಿಲ್ಲ. ಈ ಹಿಂದೆ ಕೂಡ ಅವರು ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಹಾಗೂ ಕೊರೋನಾ ಇದ್ದಂತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿರುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದರು.
ಇವರ ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಷರತ್ತುಬದ್ಧ ಜಾಮೀನನ್ನು ಉದಯನಿಧಿ ಸ್ಟಾಲಿನ್ ಪಡೆದಿದ್ದರು.
