ರಾಯಬಾಗ: ಬೆಳಗಾವಿಯಲ್ಲಿ ಎಮ್ಇಎಸ್ ನಾಯಕರು ಜೂ.22 ರಂದು ಕನ್ನಡ ಕಡ್ಡಾಯದ ವಿರುದ್ಧ ಮೋರ್ಚಾ ಮಾಡಲಿದ್ದು, ಅದಕ್ಕೆ ಜಿಲ್ಲಾಧಿಕಾರಿಯವರು ಅನುಮತಿ ನಿರಾಕರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಅಶೋಕ ಅಂಗಡಿ ನೇತೃತ್ವದಲ್ಲಿ ಕರವೇ ಕಾಯರ್ಯಕರ್ತರು ಗ್ರೇಡ್2 ತಹಶೀಲ್ದಾರ ಪರಮಾನಂದ ಮಂಗಸೂಳಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಕಳೆದ ಐದು ವರ್ಷಗಳಿಂದ ಗಡಿಭಾಗ ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಮಾಡಿ ಮುಗ್ಧ ಮರಾಠಿಗರನ್ನು ಪ್ರಚೋದಿಸಿ ಅವರನ್ನು ಕರ್ನಾಟಕ ಸರಕಾರದ ವಿರುದ್ಧ, ಕನ್ನಡಿಗರ ವಿರುದ್ಧ ಎತ್ತಿ ಕಟ್ಟುತ್ತಲೇ ಬಂದಿರುವ ನಾಡದ್ರೋಹಿ ಎಮ್ಇಎಸ್ ನಾಯಕರು ಈಗ ಮತ್ತೆ ಬೆಳಗಾವಿಯಲ್ಲಿ ಬಾಲ ಬಿಚ್ಚುತ್ತಿದ್ದಾರೆ. ಅವರನ್ನು ತಕ್ಷಣ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕು,
ಬೆಳಗಾವಿ ಕನ್ನಡದ ನೆಲ, ಇಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಕನ್ನಡಿಗರಾದ ನಮಗೆ ಹೆಮ್ಮೆ ಹಾಗೂ ಕರ್ತವ್ಯ. ಕನ್ನಡ ಕಡ್ಡಾಯದ ವಿರುದ್ಧ ದಿ.22 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಎಮ್ಇಎಸ್ ನಾಯಕರನ್ನು ಮುಂಜಾಗೃತವಾಗಿ ಬಂಧಿಸಬೇಕು. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.
ಒಂದುವೇಳೆ ಜಿಲ್ಲಾಡಳಿತ ರಾಜಕೀಯ ಒತ್ತಡಕ್ಕೆ ಮಣಿದು ಎಮ್ಇಎಸ್ ಗೆ ಕನ್ನಡ ಕಡ್ಡಾಯದ ವಿರುದ್ಧ ಅನುಮತಿ ನೀಡಿದರೆ ಪ್ರತಿಯಾಗಿ ಅಂದೇ ಕರವೇ ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮ ಎಂದು ಕನ್ನಡ ಸ್ವಾಭಿಮಾನಿ ರ್ಯಾಲಿ ನಡೆಸಲಿದೆ. ರ್ಯಾಲಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುತ್ತಾರೆಂದು ತಿಳಿಸಿದರು.
ರಾಜು ಕುಲಗುಡೆ, ಆನಂದ ಹುದ್ದಾರ, ರಮೇಶ ಜಾಧವ, ಕಿರಣ ನಾವಿ, ಉಮೇಶ ಕಾಂಬಳೆ, ಮಹೇಶ ಕೊರವಿ, ವಿಶಾಲ ಶಾರಬಿದ್ರೆ, ಸುಪ್ರೀತ ಗಣಿ, ಮಣಿಕಂಠ ನಾವಿ ಸೇರಿ ಅನೇಕರು ಇದ್ದರು.
