ಬಳ್ಳಾರಿ :08. ಬಸವಾದಿ ಶರಣರ ತಾತ್ವಿಕ ಚಿಂತನೆಗಳು ಸರ್ವಕಾಲಿಕವಾದ ಜೀವನ ಮೌಲ್ಯಗಳನ್ನು ಹೊಂದಿರುವುದರಿಂದ ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗದಗ ತೋಂಟದಾರ್ಯ ಮಠದ ಜಗದ್ಗುರು ಶ್ರೀ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.
ಅವರು ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಬಳ್ಳಾರಿಯ ಬಸವ ಭವನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜಮುಖಿ ಆದರ್ಶ ಬದುಕನ್ನು ನಡೆಸಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಸಿದ್ಧರಾಮ ಸ್ವಾಮಿಗಳು ತಿಳಿಸಿದರು.
ಪ್ರೇಮಕ್ಕ ಅಂಗಡಿ ಶರಣ ಪಥದ ನಿಜಾಚಾರಣೆಗಳ ಕುರಿತಾಗಿ ಉಪನ್ಯಾಸ ನೀಡಿದರು. ಶೇಗುಣಸಿಯ ಬಸವಪ್ರಭು ಸ್ವಾಮೀಜಿ ವಿಶೇಷ ಉಪನ್ಯಾಸ ನೀಡುತ್ತಾ ಕನ್ನಡ ಸಾಹಿತ್ಯದ ಜೀವಸತ್ವ ವಚನ ಸಾಹಿತ್ಯವೇ ಆಗಿದೆ ಎಂದರು.
ಶಾಸಕರಾದ ನಾರಾ ಭರತರೆಡ್ಡಿ ಸಭೆಯನ್ನುದ್ದೇಶಿಸಿ ಮಾತನಾಡಿ ಮುಂದಿನ ವರ್ಷ ಬಳ್ಳಾರಿಯಲ್ಲಿ 2 ಕೋಟಿ ವೆಚ್ಚದಲ್ಲಿ ಅಶ್ವಾರೂಢ ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಭಾಲ್ಕಿಯ ಸಂಸ್ಥಾನ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಮಾತಾನಾಡುತ್ತಾ ಬಸವಾದಿ ಶರಣರು ಕಟ್ಟ ಬಯಸಿದ್ದ ಸರ್ವರೀತಿಯ ಶೋಷಣಾಮುಕ್ತ ಸಮಾನತೆಯ ಸಮ ಸಮಾಜದ ನಿರ್ಮಾಣ ಕನಸನ್ನು ನನಸು ಮಾಡುವ ಮುನ್ನಡೆಯೇ ಈ ಬಸವ ಸಂಸ್ಕೃತಿ ಅಭಿಯಾನದ ಉದ್ದೇಶವಾಗಿದೆ ಎಂದರು.
ವೇದಿಕೆಯಲ್ಲಿ ಉರುವಕೊಂಡ ಜಗದ್ಗುರು ಕರಿಬಸವರಾಜೇಂದ್ರ ಸ್ವಾಮಿಗಳು, ಸಂಡೂರಿನ ವಿರಕ್ತಮಠದ ಪ್ರಭುಸ್ವಾಮಿಗಳು, ಹಂದಿಗುಂದದ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರು ಬಸವ ಪಟ್ಟದ್ದೇವರು, ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, ರಾಮಚಂದ್ರ ರೆಡ್ಡಿ, ಮಾಜಿ ಬೂಡಾ ಅಧ್ಯಕ್ಷ ಡಾ ಮಹಿಪಾಲ, ಜಾಗತೀಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎನ್.ಜಿ. ಬಸವರಾಜಪ್ಪ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಣೇಕಲ್ಲು ಮಹಾಂತೇಶ, ಕೆ.ವಿ. ರವಿಶಂಕರ ಸೇರಿದಂತೆ ಇತರರಿದ್ದರು. ಲೆಕ್ಕಪರಿಶೋಧಕಸಿರಿಗೇರಿ ಪನ್ನಾರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ನಂತರ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಜಂಗಮದೆಡೆಗೆ ಎನ್ನುವ ನಾಟಕ ಪ್ರದರ್ಶನವನ್ನು ಪ್ರದರ್ಶಿಶಿಸಲಾಯಿತು.ಸಂಜೆ ಬಸವ ಜ್ಯೋತಿ ರಥ ಯಾತ್ರೆಯನ್ನು ಭವ್ಯವಾಗಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಯಶಸ್ವಿಯಾಗಿ ನಡೆಸಿಕೊಟ್ಟರು.