ಹಸಿರು ಕ್ರಾಂತಿ ವರದಿ ಚನ್ನಮ್ಮನ ಕಿತ್ತೂರು
ಆರೋಗ್ಯವಂತ ಬದುಕಿಗೆ ಯೋಗವೇ ಉತ್ತಮ ಔಷಧಿಯಾಗಿದ್ದು, ಪ್ರತಿಯೊಬ್ಬರು ನಿತ್ಯ ಯೋಗ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿತ್ತೂರಿನ ಗ್ರೇಡ್-1 ತಹಸೀಲ್ದಾರ್ ಕಲಗೌಡ ಪಾಟೀಲ ಮನವಿ ಮಾಡಿದರು.
ಕಿತ್ತೂರಿನ ಕೋಟೆಯ ಆವರಣದಲ್ಲಿ ತಾಲೂಕು ಆಡಳಿತ ದ ವತಿಯಿಂದ ಹಮ್ಮಿಕೊಂಡ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಬಲ್ಲವನಿಗೆ ರೋಗವಿಲ್ಲವೆಂಬ ಗಾದೆಯ ಮಾತಿನೊಂದಿಗೆ ಮಕ್ಕಳಿಂದ ವೃದ್ಧರಿಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಾಯಕವಾಗಿದೆ ಎಂದು ತಿಳಿಸಿದರು.
ಕ್ಯುರೇಟರ್ ರಾಘವೇಂದ್ರ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ ಪ್ರಾಸ್ತಾವಿಕ ನುಡಿಗಳಲ್ಲಿ ಯೋಗವು ಯೌವನ ಭರಿತ ಬದುಕಿಗೆ ಯಾವ ರೀತಿ ಸಹಾಯಕವಾಗಿದೆ ಎಂಬುವುದರ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಪಾರ ಜನತೆಗೆ ಕಿತ್ತೂರಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ಅಧಿಕಾರಿಗಳಾದ ಪ್ರಶಾಂತ ರಾಮನಟ್ಟಿ ಮತ್ತು ಕುಮಾರಿ ಕೃತಿ ರಾಘವೇಂದ್ರ ಯೋಗ ತರಬೇತಿ ನೀಡಿ ವಿವಿಧ ಆಸನಗಳ ಮಹತ್ವ ತಿಳಿಸಿದರು.
ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ವಂದಿಸಿದರು. ಸಿಪಿಐ ಶಿವಾನಂದ ಗುಡುಗನಟ್ಟಿ, ಪಿಎಸೈ ಭರತ ಎಸ್, ಅರಣ್ಯ ಅಧಿಕಾರಿ ಸಿದ್ದಪ್ಪ ಖೋತ, ತಹಸೀಲ್ದಾರ್, ಲೋಕೋಪಯೋಗಿ, ಕೃಷಿ, ಶಿಕ್ಷಣ ಮತ್ತು ಟ್ರಜರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಮುಖ್ಯ ಶಿಕ್ಷಕರಾದ ಮಹೇಶ ಚನ್ನಂಗಿ, ಬಸವರಾಜ ಬಿದರಿ, ಆರ್.ಜಿ.ಎಸ್ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು, ವಸ್ತು ಸಂಗ್ರಹಾಲಯದ ಸಿಬ್ಬಂದಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಇತರರು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ವಿಶೇಷ ಘೋಷ ವಾಕ್ಯದಡಿ ನಡೆದ ಸಾಮೂಹಿಕ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇತ್ತೀಚೆಗೆ ಗ್ರೇಡ್-1 ತಹಸೀಲ್ದಾರ್ರಾಗಿ ಬಡ್ತಿ ಹೊಂದಿದ ಕಲಗೌಡ ಪಾಟೀಲ ಮತ್ತು ಯೋಗ ತರಬೇತಿ ನೀಡಿದ ಪ್ರಶಾಂತ ರಾಮನಟ್ಟಿ ಅವರನ್ನು ಗೌರವಿಸಲಾಯಿತು.
