ಬಾಗಲಕೋಟೆ,ಜೂ,೧೩: ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ಬಿಟಿಡಿಎ ಕಚೇರಿ ಆವರಣದಲ್ಲಿ ಶನಿವಾರ ಮುಳುಗಡೆ ವಿವಿಧ ಸಂತ್ರಸ್ತರಿಗೆ ಹಕ್ಕು ಪತ್ರ ಹಾಗೂ ಇ-ಖಾತಾ ಉತಾರಗಳನ್ನು ವಿತರಿಸಿ ಮಾತನಾಡಿದ ಅವರು ಮುಳುಗಡೆ ಸಂತ್ರಸ್ತರಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಪ್ರಾಧಿಕಾರದಲ್ಲಿ ಸಾಕಷ್ಟು ಕೆಲಸಗಳು ಉಳಿಸಿದೆ. ಅವೇಲ್ಲವೂಗಳನ್ನು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಪ್ರತಿ ದಿನದ ಕೆಲಸ ಕಾರ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಕಚೇರಿ ಆಗಮಿಸಿದ ಪ್ರತಿಯೊಬ್ಬ ಸಂತ್ರಸ್ತರ ದೂರುಗಳಿಗೆ ಸ್ಪಂದಿಸುವ ಮೂಲಕ ತ್ವರಿತಗತಿಯಲ್ಲಿ ಬಗೆಹರಿಸುವ ಕೆಲಸವಾಗಬೇಕು. ಪ್ರಾಧಿಕಾರದ ಸಭೆಯಲ್ಲಿ ಆಗಬೇಕಾದ ಕೆಲಸ, ಯೋಜನೆ ಯಾವ ರೀತಿ ಹಾಕಿಕೊಳ್ಳಬೇಕು ಹಾಗೂ ಇರುವಂತಹ ಕೆಲಸಗಳನ್ನು ಪೂರ್ಣಗಿಳಿಸುವ ಕುರಿತು ಕ್ರಮವಹಿಸಲಾಗುತ್ತಿದೆ. ಇದರ ಜೊತೆಗೆ ಯುನಿಟ್-೧ ಮತ್ತು ೨ರಲ್ಲಿ ಸ್ವಚ್ಚತೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಪರಿಸರ ದಿನಾಚರಣೆಯಂದು ಈ ಕಾರ್ಯ ಕೈಗೊಂಡಿದ್ದು, ಇನ್ನು ೧೦ ದಿನಗಳ ವರೆಗೆ ಈ ಸ್ವಚ್ಚತಾ ಅಭಿಯಾನ ಕೂಡಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಶಾಸಕ ಉಮೇಶ ಮೇಟಿ ಮಾತನಾಡಿ ಸಂತ್ರಸ್ತರ ನೋವಿಗೆ ಸ್ಪಂದಿಸುವ ಕೆಲಸವಾಗಬೇಕು. ಸಂತ್ರಸ್ತರು ಕಚೇರಿ ಬಂದಾಗ ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸಿ ಕೆಲಸಗಳನ್ನು ಮಾಡಿಕೊಡಬೇಕು. ಈ ಟೇಬಲ್ಗ ಆ ಟೇಬಲ್ಗೆ ಹೋಗಿ ಎಂದು ಹೇಳಕೂಡದು. ಸಣ್ಣ ಕೆಲಸ ಈರಲಿ ದೊಡ್ಡ ಕೆಲಸವಿರಣಿ ಅಲೇದಾಡುವದನ್ನು ತಪ್ಪಿಸಿ ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಕಾರ್ಯವಾಗಬೇಕೆಂದು ತಿಳಿಸಿದರು.
ಈ ವೇಳೆ ೧೫ ಸಂತ್ರಸ್ತರಿಗೆ ಹಕ್ಕುಪತ್ರ ಹಾಗೂ ೪೬ ಜನರಿಗೆ ಇ-ಖಾತಾ ಉತಾರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬುಡಾದ ಅಧ್ಯಕ್ಷ ಅಬ್ದುಲ್ರಜಾಜ ಬೇನೂರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅನೀಲ ದಡ್ಡಿ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮುಖ್ಯ ಅಭಿಯಂತರ ಚಂದ್ರಹಾಸ ಬಂಡಿ, ಜಂಟಿ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಪುನರ್ವಸತಿ ಅಧಿಕಾರಿ ಆಗಿರುವ ಪ್ರಶಾಂತ ಬಾರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು.
.ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಬಾಗಲಕೋಟೆ ನಗರದ ವ್ಯಾಪಾರಸ್ತರ ಬಹುದುನಗಳ ಬೇಡಿಕೆಯಾದ ನವನಗರದ ವ್ಯಾಪ್ತಿಯಲ್ಲಿ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಶಾಸಕರಲ್ಲಿ ಕೇಳಿಕೊಂಡಾಗ ಈಗಾಗಲೇ ನವನಗರದ ವ್ಯಾಪ್ತಿಯ ೨೦೦ ಎಕರೆ ಜಾಗೆಯಲ್ಲಿ ಸುಸಜ್ಜಿತವಾದ ನೂತನ ಮಾರುಕಟ್ಟೆ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ ಹಾಗೂ ಸಚಿವರು ಗಮನಕ್ಕೆ ತರಲಾಗಿದ್ದು, ಈ ಕಾರ್ಯ ಕೈಗೂಡಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದೆಂದು ಬಾಗಲಕೋಟೆ ಶಾಸಕ ಉಮೇಶ ಮೇಟಿ ಹೇಳಿದರು.
