ಕಾಗವಾಡ: :ಹಿಪ್ಪರಗಿ ಆಣೆಕಟ್ಟಿನ ಹಿನ್ನೀರಿನಿಂದ ಸಂಪೂರ್ಣ ಮುಳುಗಡೆಗೊಂಡ ಮೊಳವಾಡ ಗ್ರಾಮದ ನಿವಾಸಿಗಳಿಗೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳನ್ನು ತಕ್ಷಣ ಕಲ್ಪಿಸುವಂತೆ ಆಗ್ರಹಿಸಿ, ಹಿಪ್ಪರಗಿ ಆಣೆಕಟ್ಟು ಯೋಜನೆಯ ಸಂಪೂರ್ಣ ಮುಳುಗಡೆಗೊಂಡ ಮೊಳವಾಡ ಗ್ರಾಮ ಪುನರ್ವಸತಿ ಹೋರಾಟ ಸಮಿತಿಯ ಸದಸ್ಯರು ಕಾಗವಾಡ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಕಳೆದ 14 ವರ್ಷಗಳಿಂದ ಮೊಳವಾಡ ಗ್ರಾಮದ ಸಂತ್ರಸ್ತರು ಶಾಶ್ವತ ಪುನರ್ವಸತಿ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, RFCTLARR Act–2013 ಹಾಗೂ ಕರ್ನಾಟಕ ಸರ್ಕಾರದ ಪುನರ್ವಸತಿ ನೀತಿಗಳ ಪ್ರಕಾರ ಸಂತ್ರಸ್ತರಿಗೆ ನ್ಯಾಯಸಮ್ಮತ ಪರಿಹಾರ, ಪುನರ್ವಸತಿ ಮತ್ತು ಪುನರ್ಸ್ಥಾಪನೆ ಕಲ್ಪಿಸುವಂತೆ ಒತ್ತಾಯಿಸಿದರು
ಸಂಪೂರ್ಣ ಮುಳುಗಡೆಗೊಂಡ ಗ್ರಾಮಕ್ಕೆ ಶಾಶ್ವತ ಪುನರ್ವಸತಿ, ಅರ್ಹ ಕುಟುಂಬಗಳಿಗೆ ಮನೆ ಅಥವಾ ನಿವೇಶನ, ಬಾಕಿ ಪರಿಹಾರ ಪಾವತಿ, ಪುನರ್ವಸತಿ ಪ್ರದೇಶದಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ, ಬೀದಿ ದೀಪ, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, , ಸ್ಮಶಾನ ಹಾಗೂ ಧಾರ್ಮಿಕ ಸ್ಥಳಗಳಿಗೆ ಜಾಗ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು . ಜೊತೆಗೆ ಜೀವನೋಪಾಯ ಕಳೆದುಕೊಂಡ ಕುಟುಂಬಗಳಿಗೆ ಉದ್ಯೋಗ, ಕೌಶಲ್ಯ ತರಬೇತಿ, ಸ್ವಯಂ ಉದ್ಯೋಗ ನೆರವು ಹಾಗೂ ಸ್ಥಳಾಂತರ ಮತ್ತು ಪುನರ್ವಸತಿ ಭತ್ಯೆ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದರು
ಮನವಿಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಆಗಸ್ಟ್ 10ರಿಂದ ಕಾಗವಾಡ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡದರು
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸದಸ್ಯರಾದ ದೇವಗೌಡ ಹುದ್ದಾರ, ಭಾಸ್ಕರ ಹಲ್ಯಾಳ, ಕೇಶವ ಕಾಂಬಳೆ, ಅಜಿತ್ ಭಂಡಾರೆ, ಗಣಪತಿ ಕಾಂಬಳೆ, ಸುನೀಲ್ ಕಾಂಬಳೆ, ದಯಾನಂದ ಕೇರೂರೆ, ಶಾಂತಿನಾಥ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.