ಘಟಪ್ರಭಾ :- ಇಲ್ಲಿನ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪರಮಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ 42 ನೇ ಜನ್ಮದಿನದ ಪ್ರಯುಕ್ತ ಅವರ ಭಕ್ತಸಮೂಹ, ಅನೇಕ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳು ಪ್ರಯೋಜಕತ್ವದಲ್ಲಿ ಅನೇಕ ಜನಪರ ಅರೋಗ್ಯ, ದಾಸೋಹ, ದೇಣಿಗೆ, ರಕ್ತದಾನ ಶಿಬಿರ ಅನೇಕ ವಿನೂತನ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ಮಂಗಳವಾರ ದಿ.4-8-2026 ರಂದು ಬೆಳಿಗ್ಗೆ 8 ಘಂಟೆಗೆ ಮೃತ್ಯುಂಜಯ ಸಾಂಸ್ಕೃತಿಕ ಭವನದಲ್ಲಿ ಗೋಕಾಕ ರೋಟರಿ ರಕ್ತ ಭಂಡಾರ ಇವರ ನೇತೃತ್ವದಲ್ಲಿ ಬೃಹತ್ ಐಚ್ಚಿಕ್ ರಕ್ತದಾನ ಶಿಬಿರ ನಡೆಯಿತು. ಭಕ್ತಿಪೂರ್ವಕವಾಗಿ ಅನೇಕ ಜನ ರಕ್ತದಾನ ಮಾಡಿ ಶ್ರೀಗಳ ಹಾಗೂ ಶ್ರೀ ಕೆಂಪಯ್ಯಸ್ವಾಮಿ ಮಠದ ಪ್ರೀತಿಗೆ ಪಾತ್ರರಾದರು.

ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಬೆಳಿಗ್ಗೆ ಮಹಾಪೂಜೆ, ಕರ್ತುಗದ್ದುಗೆಗೆ ಮಹಾಭಿಷೇಕ,ತದನಂತರ ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆಯ ದಿ. ಡಾ ಗಂಗಾಧರ ಮಹಾಸ್ವಾಮಿಗಳ ಪುತ್ತಳಿಗೆ ಪೂಜೆ ನೆರವೇರಿಸಿ, ಶಾಲೆ ವಿದ್ಯಾರ್ಥಿಗಳೊಂದಿಗೆ, ಶಿಕ್ಷಕರೊಂದಿಗೆ ಜನ್ಮದಿನ ಆಚರಿಸಿಕೊಂಡರು. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಜನ್ಮದಿನದ ನಿಮಿತ್ಯ ಕೆ.ಎಲ್.ಇ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಜೆ.ಎನ್.ಮೆಡಿಕಲ್ ಕಾಲೇಜು ವೈದ್ಯರು ಹಾಗೂ ಜೆ.ಜಿ.ಕೋ ಆಸ್ಪತ್ರೆ, ಕೆ.ಎಚ್.ಐ. ಆಸ್ಪತ್ರೆ, ಗೋಕಾಕ ತಾಲೂಕಾ ಆಸ್ಪತ್ರೆ, ಶಿಂದಿಕುರಬೇಟ ಪ್ರಾಥಮಿಕ ಅರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಚಿಕಿತ್ಸೆ ಹಾಗೂ ಅರೋಗ್ಯ ತಪಾಸಣೆ ಶಿಬಿರ ನೆರವೇರಿತು. ಘಟಪ್ರಭಾ ಭಾಗದ ಸಹಸ್ರಾರು ಜನರು ಅರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಂಡರು.
ಘಟಪ್ರಭಾ ಪಟ್ಟಣದ ಜೆ.ಜಿ.ಸಹಕಾರಿ ಆಸ್ಪತ್ರೆ ಮತ್ತು ಅರೋಗ್ಯ ಧಾಮದ (ಕೆ.ಎಚ್.ಐ.) ಆಸ್ಪತ್ರೆಯ ಒಳರೋಗಿಗಳಿಗೆ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಹಣ್ಣು ಹಂಪಲು ವಿತರಿಸಲಾಯಿತು.
ಶ್ರೀಗಳ ಆಶಯದಂತೆ ಅನೇಕ ಬಡ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಯಿತು. ಹಿಡಕಲ ಡ್ಯಾಮ ನ ವಿಕಲ ಚೇತನ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಅರೋಗ್ಯ ತಪಾಸಣೆ, ಊಟ ಉಪಚಾರ, ಗೋಕಾಕ ಅನಾಥ ಆಶ್ರಮ ವಿದ್ಯಾರ್ಥಿಗಳಿಗೆ ಬಟ್ಟೆ ವಿತರಣೆ ಮಾಡಲಾಯಿತು. ನಂತರ ಅವರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಹಸ್ರಾರು ಜನ ಭಕ್ತ ಸಮೂಹ, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರು, ಜೆ.ಜಿ.ಸಹಕಾರಿ ಆಸ್ಪತ್ರೆ ಅಧ್ಯಕ್ಷ, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ವೈದ್ಯರು, ಸಿಬ್ಬಂದಿ, ಘಟಪ್ರಭಾ ಪಟ್ಟಣದ ಅನೇಕ ಸಹಕಾರಿ ಸಂಘಗಳ ಅಧ್ಯಕ್ಷರು ಆಡಳಿತ ಮಂಡಳಿ, ರೈತ ಮುಖಂಡರು, ರಾಜಕೀಯ ಮುಖಂಡರು, ಕರವೇ ಸಂಘಟನೆ ಪದಾಧಿಕಾರಿಗಳು, ಸದಸ್ಯರು, ಹೆಚ್ಚಿನ ಮಹಿಳಾ ಭಕ್ತರು ಸರದಿ ಸಾಲಿನಲ್ಲಿ ನಿಂತು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ಆಶೀರ್ವಾದ ಪಡೆದರು

ತಮ್ಮ 42 ಹುಟ್ಟುಹಬ್ಬದ ಸಂದರ್ಭದಲ್ಲಿ ಭಕ್ತ ಸಾಗರವನ್ನು ಉದ್ದೇಶಿಸಿ ಮಾತನಾಡಿದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಳೆದ 13 ವರ್ಷಗಳಿಂದ ತಾವೆಲ್ಲರೂ ನನ್ನ ಜನ್ಮದಿನದಂದು ಬಡವರ, ಬಡ ವಿದ್ಯಾರ್ಥಿಗಳ, ಅನಾಥರ, ವಿಕಲ ಚೇತನರ, ರೋಗಿಗಳು ಸೇರಿದಂತೆ ಸಕಲ ಜನತೆಯ ಒಳಿತಿಗೆ ಅರೋಗ್ಯ ತಪಾಸಣೆ, ಚಿಕಿತ್ಸೆ, ರಕ್ತದಾನ, ಸಲಕರಣೆ ವಿತರಣೆ, ಮಹಾಪ್ರಸಾದದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನನಗೆ ಮುಂದಿನ ದಿನಮಾನಗಳಲ್ಲಿ ತಮ್ಮ ಒಳಿತಿಗೆ ಹೋರಾಟ, ತಪಸ್ಸು, ನಿಸ್ವಾರ್ಥ ಸೇವೆ ಸಲ್ಲಿಸಲು ಪ್ರೇರಣೆ ಹಾಗೂ ಹುಮ್ಮಸ್ಸು ಬಂದಿದ್ದು ಈ ಘಟಪ್ರಭಾ ಭಾಗದ ಜನತೆಯ ಸಲುವಾಗಿ ಸದಾ ಒಳ್ಳೆಯದನ್ನು ಮಾಡಲು ಸಿದ್ದನಿದ್ದೇನೆ ಎಂದು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
