ಬಳ್ಳಾರಿ, ಆ.:04 ವೈಟ್ಬೋರ್ಡ್ ದ್ವಿಚಕ್ರ ವಾಹನಗಳ ಮೂಲಕ ನಡೆಯುತ್ತಿರುವ ಆನ್ಲೈನ್ ಬೈಕ್ ಟ್ಯಾಕ್ಸಿ ಸೇವೆಗಳನ್ನು ತಕ್ಷಣ ನಿಷೇಧಿಸಬೇಕು ಎಂದು ಆಗ್ರಹಿಸಿ ಬಳ್ಳಾರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಹುಂಡೇಕರ್ ರಾಜೇಶ್ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ 200ಕ್ಕೂ ಹೆಚ್ಚು ಆಟೋಗಳೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ರೈಲ್ವೆ ನಿಲ್ದಾಣದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿವರೆಗೆ ತಲುಪಿತು. ಬಳಿಕ ಜಿಲ್ಲಾ ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಅವರಿಗೆ ಸಲ್ಲಿಸಬೇಕಿದ್ದ ಮನವಿ ಪತ್ರವನ್ನು ಬ್ರೂಸ್ಪೇಟೆ ಪೊಲೀಸ್ ಠಾಣೆಯ ಸಿಐ ಮಹಾಂತೇಶ್ ಅವರಿಗೆ ಪ್ರತಿಭಟನಾಕಾರರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಂಡೇಕರ್ ರಾಜೇಶ್, "ಬಳ್ಳಾರಿ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಸುಮಾರು 15 ಸಾವಿರ ಆಟೋ ಚಾಲಕರು ಆಟೋವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ವೈಟ್ಬೋರ್ಡ್ ಬೈಕ್ಗಳ ಮೂಲಕ ಆನ್ಲೈನ್ ರೈಡ್ ಸೇವೆಗಳು ನಡೆಯುತ್ತಿರುವುದು ನಮ್ಮ ಜೀವನೋಪಾಯಕ್ಕೆ ದೊಡ್ಡ ಹೊಡೆತ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರವು ಬೈಕ್ ಟ್ಯಾಕ್ಸಿಗೆ ಆರ್ಟಿಒ ಅನುಮತಿ ಮತ್ತು ಕಪ್ಪು ನಾಮಫಲಕ ಕಡ್ಡಾಯ ಮಾಡಿದೆ. ಆದರೂ ಬಳ್ಳಾರಿಯಲ್ಲಿ ಸುಮಾರು 500ಕ್ಕೂ ಹೆಚ್ಚು ವೈಟ್ಬೋರ್ಡ್ ಬೈಕ್ಗಳು ರ್ಯಾಪಿಡೊ ಮತ್ತು ಇತರೆ ಆಪ್ಗಳ ಮೂಲಕ ಅಕ್ರಮವಾಗಿ ಸೇವೆ ನೀಡುತ್ತಿವೆ ಎಂದು ಅವರು ಆರೋಪಿಸಿದರು. "ಅಪಘಾತವಾದರೆ ಹೊಣೆ ಯಾರು? ಈಗಾಗಲೇ ಉಚಿತ ಬಸ್ ಯೋಜನೆ, ಗ್ಯಾಸ್ ದರ ಏರಿಕೆಯಿಂದ ನಾವು ಸಂಕಷ್ಟದಲ್ಲಿದ್ದೇವೆ" ಎಂದು ಬೇಸರಿಸಿದರು.
ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗಳನ್ನು ಕೂಡಲೇ ಸ್ಥಗಿತಗೊಳಿಸಿ ಬಡ ಆಟೋ ಚಾಲಕರ ಹಿತ ಕಾಪಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಮತ್ತು ನೂರಾರು ಆಟೋ ಚಾಲಕರು ಭಾಗವಹಿಸಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.