ಚಿಕ್ಕೋಡಿ: ಆರ್ಥಿಕ ಸೇವೆಗಳ ಜೊತೆಗೆ ಸಾಮಾಜಿಕ ಬದ್ಧತೆಯನ್ನೂ ಸಮಾನವಾಗಿ ನಿರ್ವಹಿಸುತ್ತಿರುವ ಸಾಯಿ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹112 ಕೋಟಿ ಠೇವಣಿ ಸಂಗ್ರಹಿಸಿ, ₹100 ಕೋಟಿ ಸಾಲ ವಿತರಣೆ ಮಾಡುವ ಮೂಲಕ ₹1.05 ಕೋಟಿ ನಿವ್ವಳ ಲಾಭ ದಾಖಲಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ತಿಳಿಸಿದರು.
ಪಟ್ಟಣದ ಎಂ.ಕೆ. ಕವಟಗಿಮಠ ಕನ್ವೆನ್ಷನ್ ಹಾಲ್ನಲ್ಲಿ ಶನಿವಾರ ನಡೆದ ಸಂಸ್ಥೆಯ 13ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಯು ಸದಸ್ಯರ ಹಿತದೃಷ್ಟಿಯಿಂದ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸಿದ್ದು, ಎಲ್ಲ ಸದಸ್ಯರಿಗೆ ಉಚಿತ ಅಪಘಾತ ವಿಮೆ ಕಲ್ಪಿಸಲಾಗಿದೆ. ವಿಶೇಷವಾಗಿ ಪತ್ರಕರ್ತರಿಗೂ ವಿಮಾ ಸೌಲಭ್ಯ ವಿಸ್ತರಿಸಿರುವುದು ಸಂಸ್ಥೆಯ ಸಾಮಾಜಿಕ ಬದ್ಧತೆಯ ಪ್ರತೀಕವಾಗಿದೆ. ಸರ್ಕಾರಿ ಬ್ಯಾಂಕ್ಗಳ ಮಾದರಿಯಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿಗೆ ಆರೋಗ್ಯ, ವಿಮೆ ಮತ್ತು ಪಿಂಚಣಿ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕೃಷಿ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವ ಸಾಯಿ ಸೌಹಾರ್ದ ಸಹಕಾರಿಯ ಕಾರ್ಯ ಶ್ಲಾಘನೀಯವಾಗಿದೆ. ಗ್ರಾಹಕರು ಪಡೆದ ಸಾಲವನ್ನು ಉತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ಬೆಂಗಳೂರು ಸೌಹಾರ್ದ ಸಹಕಾರಿ ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ್ ಮಾತನಾಡಿ, ಆರ್ಥಿಕ ಸಾಕ್ಷರತೆ ಪ್ರತಿಯೊಬ್ಬರ ಜೀವನದಲ್ಲಿ ಅತ್ಯವಶ್ಯಕವಾಗಿದೆ. ಆಡಳಿತ ಮಂಡಳಿಯ ಪಾರದರ್ಶಕತೆ ಮತ್ತು ಶಿಸ್ತು ಸಂಸ್ಥೆಯ ಮೇಲಿನ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗದೆ, ವಿಶ್ವಾಸಾರ್ಹ ಹಣಕಾಸು ಸಂಸ್ಥೆಗಳಲ್ಲೇ ಹಣ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕ ರವೀಂದ್ರ ಪಾಟೀಲ ಮಾತನಾಡಿದರು. ನಿರ್ದೇಶಕ ಪ್ರವೀಣ ಕಾಂಬಳೆ ವಾರ್ಷಿಕ ವರದಿ ಮಂಡಿಸಿದರು. ಮುಖ್ಯ ಕಾರ್ಯನಿರ್ವಾಹಕ ಸತೀಶ ಪಾಟೀಲ ಸಭೆಯ ವಿಷಯಗಳನ್ನು ಮಂಡಿಸಿದರು.
ಇದೇ ವೇಳೆ ಹೆಚ್ಚು ಠೇವಣಿ ಸಂಗ್ರಹ, ಸಾಲ ಮರುಪಾವತಿ ಹಾಗೂ ಲಾಭಾಂಶ ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದ ಸಂಸ್ಥೆಯ ವಿವಿಧ ಶಾಖೆಗಳ ವ್ಯವಸ್ಥಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಷಡಕ್ಷರಿ ಮೂಗೇರಿ ಸೇರಿದಂತೆ ನಿರ್ದೇಶಕರಾದ ಸಂಜಯ ಗಿಡವೀರ, ರಮೇಶ್ ಕುಡತರಕರ್, ಲೋಕಪ್ಪಾ ದುಂಬಾಳಿ, ಘೇವರಚಂದ ಶಹಾ, ಡಾ. ಅಜಿತ ಚರಾಟಿ, ಶ್ರೀಧರ ದೀಕ್ಷಿತ, ಶಿವಜಾತ ಮಿರ್ಜೆ, ಚಿದಾನಂದ ಹಿರೇಮಠ, ಮನೋಜಕುಮಾರ್ ಸಮತ್ಶೆಟ್ಟಿ, ರವೀಂದ್ರ ಕರಾಡಕರ್, ರೂಪ ಹಂಪಣ್ಣವರ, ಸಂಜಯ ಶಿಂತ್ರೆ, ಎರಿಸ್ವಾಮಿಗೌಡ ಇಟಗೋಣಿ, ಚಂದ್ರಕಾಂತ ಬುರುಡ, ಮನೋಹರ ಚಾವಲಾ, ರಾಜಕುಮಾರ ಹಿರೇಮಠ, ಮಹಾಂತೇಶ ಕವಲಾಪುರೆ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ಹಾಗೂ ನೂರಾರು ಸದಸ್ಯರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ : ಸಾಯಿ ಸೌಹಾರ್ದ ಸಹಕಾರಿ ವತಿಯಿಂದ ಕೃಷಿ ಕ್ಷೇತ್ರದಲ್ಲಿ ರಾಜೇಂದ್ರ ಪಾಟೀಲ, ಸಾಮಾಜಿಕ ಕ್ಷೇತ್ರದಲ್ಲಿ ಸುಷ್ಮಾ ಬಡಕಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸುಲ್ತಾನ ಬೀರನ್ನವರ ಅವರನ್ನು ವಿಶೇಷ ಸಾಧನೆಗಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರಿಗೆ ವಿಮಾ ಕಾರ್ಡ್ಗಳನ್ನು ವಿತರಿಸಿ ಸಂಸ್ಥೆಯ ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸಲಾಯಿತು.