* ರಾಜಾಪೂರದಲ್ಲಿ ನೂತನ ಸಮುದಾಯ ಭವನ ಲೋಕಾರ್ಪಣೆ
* 30 ಲಕ್ಷ ರೂ. ವೆಚ್ಚದ ಸಮುದಾಯ ಭವನ
* ಶ್ರೀ ಚೂನಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ನೂತನ ಭವನ ಉದ್ಘಾಟನೆ
ಮೂಡಲಗಿ:, ಗ್ರಾಮೀಣ ಭಾಗದ ಜನರಿಗೆ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶದ ಅಗತ್ಯವಿತ್ತು. ಸಂಸದರ ನಿಧಿಯನ್ನು ಸದ್ಬಳಕೆ ಮಾಡಿಕೊಂಡು ನಿರ್ಮಿಸಿರುವ ಈ ಸಮುದಾಯ ಭವನವು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಹಕಾರಿಯಾಗಲಿದೆ ಎಂದು ಮಾಜಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಆ-೦೭ ರಂದು ರಾಜಾಪೂರ ಗ್ರಾಮದ ಚುನಿಮಟ್ಟಿಯ ಶ್ರೀ ಚೂನಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.೩೦ ಲಕ್ಷಗಳ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾದ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವೇಳೆ ಗ್ರಾಮದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದ ಅವರು, ರಾಜಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಕೆಗೆ ೫ ಲಕ್ಷ, ಶ್ರೀ ದುರ್ಗಾದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ೫ ಲಕ್ಷ ಹಾಗೂ ೧ ಕೋಟಿ ರೂ.ಗಳ ಅನುದಾನದಲ್ಲಿ ರಾಜಾಪೂರ ಕಲ್ಲೋಳಿ ಕೊರೆವ್ವನ ಹಳ್ಳದ ಹತ್ತಿರ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಸೇರಿದಂತೆ ರಸ್ತೆಗಳ ಸುಧಾರಣೆಗೆ ಅನುದಾನ ನೀಡಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಮಾರಂಭದಲ್ಲಿ ಕಮಿಟಿ ಅಧ್ಯಕ್ಷ ಗೋಪಾಲ ಕಮತಿ, ವಿಠ್ಠಲ ಎಣ್ಣಿ, ಚಿನ್ನಪ್ಪ ಪಾಟೀಲ, ಲಕ್ಷ್ಮಣ ಗೌಡರ, ಅಜ್ಜಪ್ಪ ಪಂಡ್ರೋಳಿ, ಹಣಮಂತ ಹುದ್ದಾರ, ರಾಮಚಂದ್ರ ಕೊಡ್ಲಿ, ಕೆಂಪಣ್ಣ ಗಡಹಿಂಗ್ಲೇಜ್, ಸುರೇಶ ಬೈರುಗೋಳ, ಮುತ್ತೆಪ್ಪ ಜೆಟ್ಟೆನ್ನವರ, ಮುತ್ತೆಪ್ಪ ಜೋಕಾನಟ್ಟಿ, ಶಾಂತಪ್ಪ ಯಂಕ್ಸಂಬಿ ಸೇರಿದಂತೆ ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಸ್ಥಳೀಯ ಪ್ರಮುಖ ನಾಯಕರು ಹಾಗೂ ರಾಜಾಪೂರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.