ಗದಗ,02 : ಸಮಾಜದ ಅಭಿವೃದ್ಧಿಗಾಗಿ ಬದುಕಿದವರನ್ನು ಸಮಾಜ ಸ್ಮರಣೆ ಮಾಡುತ್ತದೆ. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಅಂಧ- ಅನಾಥ ಮಕ್ಕಳನ್ನು ಸಲುಹಿ ಅವರಿಗೆ ಶಿಕ್ಷಣ, ಸಂಗೀತ, ಅನ್ನ ನೀಡಿ ಬದುಕನ್ನು ನೀಡಿದವರು ಉಭಯ ಗುರುಗಳು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಹೇಳಿದರು. ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಬುಧವಾರ ಲಿಂ.ಪಂ.ಪಂಚಾಕ್ಷರಿ ಗವಾಯಿಗಳವರ 82 ನೇ ಹಾಗೂ ಲಿಂ.ಡಾ.ಪಂ.ಪುಟ್ಟರಾಜ ಗವಾಯಿಗಳವರ 16 ನೇ ಪುಣ್ಯಾರಾಧನೆ ಹಾಗೂ ಸಂಗೀತ ಸಮಾರಾಧನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಂ.ಪುಟ್ಟರಾಜ ಗವಾಯಿಗಳವರು ಅಂಧರಾಗಿ,ತ್ರಿಭಾಷಾ ಪಂಡಿತರಾಗಿ 60 ಪುಸ್ತಕಗಳನ್ನು ಬರೆದಿದ್ದಾರೆ.ಸಂಗೀತ, ಸಾಹಿತ್ಯ,ಪುರಾಣ, ನಾಟಕ,ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಸಾಕಷ್ಟಿದೆ.16 ವಾದ್ಯಗಳನ್ನು ನುಡಿಸುವ ಸಾಮರ್ಥ್ಯ ಪಂ.ಪುಟ್ಟರಾಜ ಗವಾಯಿಗಳಿಗೆ ಮಾತ್ರ ಸಾದ್ಯವಿದೆ. ಅವರ ಸೇವೆಗೆ ಕೇಂದ್ರ,ಅನ್ಯ ರಾಜ್ಯ ಮತ್ತು ಕರ್ನಾಟಕ ರಾಜ್ಯ ಸರಕಾರಗಳಿಂದ ಪ್ರಶಸ್ತಿಗಳ ಸುರಿಮಳೆ ಆಗಿದೆ. ಅವರ ಸೇವೆಗೆ ಕೇಂದ್ರ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತು, ಮುಂದಿನ ದಿನಗಳಲ್ಲಿ ಆ ಕಾರ್ಯ ಆಗುತ್ತದೆ ಎಂದು ಭರವಸೆ ಇದೆ. ಅಯೋಧ್ಯಯ ರಾಮ ಮಂದಿರದಲ್ಲಿ ದೇಣಿಗೆ ಹಣ ದುರ್ಬಳಕೆ ಅಗುತ್ತಿರುವದು ಹಿಂದೂ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ಯಾವುದೇ ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ಕಹಿ ಘಟನೆಗಳು ನಡೆಯಬಾರದು. ಜಾತ್ರೆಗಳನ್ನುಮಾಡುವದರಿಂದ ಜಾತ್ಯಾತೀತ ಮನೋಭಾವನೆ ಬೆಳೆಯುತ್ತದೆ ಎಂದು ಹೇಳಿದರು.
ಕೀರ್ತನ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಹಾ ಪೀಠದ ಶ್ರೀಮದ್ ರಂಭಾಪುರಿ ಜ. ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ವಹಿಸಿದ್ದರು. ಅಧ್ಯಕ್ಷತೆಯನ್ನು ಎಮ್ಮಿಗನೂರಿನ ಪೂಜ್ಯಶ್ರೀ ವಾಮದೇವ ಮಹಾಂತ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಚಳಗೇರಿ ಹಿರೇಮಠದ ಪೂಜ್ಯಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಮ್ಮುಖವನ್ನು ನೆಗಳೂರು ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹೂವಿನ ಹಡಗಲಿಯ ಪೂಜ್ಯಶ್ರೀ ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು, ಮೈನಹಳ್ಳಿ ಬಿಕನಹಳ್ಳಿಯ ಪೂಜ್ಯಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನರೇಗಲ್ ಸವದತ್ತಿ ಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಅಡ್ನೂರ-ರಾಜೂರ-ಗದಗ ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾ ಸ್ವಾಮಿಗಳು, ಅಲಮೇಲ ಪೂಜ್ಯಶ್ರೀ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೋಲ್ ಟ್ರಸ್ಟ ಅಧ್ಯಕ್ಷ ನಿಂಗಪ್ಪ ಕೆಂಗಾರ,ಚಂದ್ರು ಬಾಳಿಹಳ್ಳಿಮಠ,ಮಹೇಶ ಶಾಬಾದಿಮಠ,ವಿ.ಎಸ್. ಮಾಳೇಕೊಪ್ಪಮಠ,ಹೇಮರಾಜ ಶಾಸ್ತ್ರಿ ಹಿರೇಮಠ, ಸೋಲ್ ಟ್ರಸ್ಟ್ ಸದಸ್ಯ ಪರಶುರಾಮ ಕಟ್ಟಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಗದ್ಗುರು ಸನ್ನಿದಿಯವರಿಂದ ಆಶ್ರಮದ ನೂತನ ವೆಬ್ಸೈಟ್ ಹಾಗೂ ಲೋಗೋ ಲೊಕಾರ್ಪಣೆ ಮಾಡಲಾಯಿತು.
