ಇಂಡಿ: ರಾಷ್ಟ್ರಧ್ವಜವು ನಾಗರಿಕರ ದೇಶಭಕ್ತಿಯನ್ನು ಬಲಪಡಿಸುತ್ತದೆ. ರಾಷ್ಟ್ರಧ್ವಜದ ಮಹತ್ವ ಅರಿತುಕೊಳ್ಳುವುದು ಹಾಗೂ ರಾಷ್ಟ್ರೀಯ ಹಬ್ಬಗಳಲ್ಲಿ ಸಂಪೂರ್ಣ ಗೌರವದೊಂದಿಗೆ ಧ್ವಜ ಅರಳಿಸಿ ವಂದಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ರಾಷ್ಟ್ರಧ್ವಜ ಸ್ವೀಕಾರ ದಿನದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತವು ವಿವಿಧ ಭಾಷೆ, ಧರ್ಮ, ಸಂಸ್ಕೃತಿ ಹೊಂದಿದ ವೈವಿಧ್ಯಮಯ ದೇಶ. ರಾಷ್ಟ್ರಧ್ವಜವು ಈ ಎಲ್ಲಾ ಭಿನ್ನತೆಗಳನ್ನು ಮೀರಿ, ಎಲ್ಲರನ್ನೂ ಒಂದೇ ಸೂರಿನಡಿ ತರುವ ಪ್ರಬಲ ಶಕ್ತಿಯಾಗಿದೆ ಎಂದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ ರಾಷ್ಟ್ರಧ್ವಜವು ಏಕತೆ, ಧೈರ್ಯ, ಸತ್ಯ, ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿದ್ದು, ರಾಷ್ಟ್ರ ಧ್ವಜವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಧ್ವಜದಲ್ಲಿರುವ ’ಕೇಸರಿ’ ಬಣ್ಣವು ದೇಶದ ರಕ್ಷಣೆಗಾಗಿ ಹೋರಾಡಿದವರ ತ್ಯಾಗ, ಧೈರ್ಯವನ್ನು, ’ಬಿಳಿ’ ಬಣ್ಣವು ಶಾಂತಿ, ಸತ್ಯವನ್ನು, ’ಹಸಿರು’ ಬಣ್ಣವು ಸಮೃದ್ಧಿ, ಪ್ರಗತಿಯನ್ನು ಮಧ್ಯದಲ್ಲಿರುವ ’ಅಶೋಕ ಚಕ್ರ’ವು ಚಲನೆ, ಪ್ರಗತಿಯನ್ನು ಬಿಂಬಿಸುತ್ತದೆ ಎಂದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು