ಹಸಿರು ಕ್ರಾಂತಿ ವರದಿ ಬೆಳಗಾವಿ
ದಕ್ಷಿಣ ಕರ್ನಾಟಕದ ದೇವಾಲಯಗಳ ಮಾದರಿಯಲ್ಲಿ ಉತ್ತರ ಕರ್ನಾಟಕದ ದೇವಾಲಯಗಳನ್ನು ಸ್ವಚ್ಛತೆ, ಶಿಸ್ತುಬದ್ಧ ಪೂಜಾ ಪದ್ಧತಿ ಹಾಗೂ ಭಕ್ತಿಸೇವೆಯ ಮೂಲಕ ಅಭಿವೃದ್ಧಿಪಡಿಸಬೇಕು ಎಂದು ಕುಂಚಿಟಿಗರ ಸಂಸ್ಥಾನ ಮಠದ ಜಗದ್ಗುರು ಹನುಮಂತನಾಥ ಮಹಾಸ್ವಾಮೀಜಿ ನುಡಿದರು.
ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಹಾಗೂ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ, ಹಿರೇಮಠ-ಹುಕ್ಕೇರಿ ಆಶ್ರಯದಲ್ಲಿ ಬೆಳಗಾವಿಯ ಲಕ್ಷ್ಮೀ ಟೆಕ್ಕಡಿಯಲ್ಲಿರುವ ಹಿರೇಮಠದಲ್ಲಿ ಜುಲೈ 21 ರಿಂದ 28 ರವರೆಗೆ ಆಯೋಜಿಸಿರುವ 8 ದಿನಗಳ ಅರ್ಚಕರ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನರ ಶ್ರದ್ಧೆ ಮತ್ತು ಭಕ್ತಿ ದೇವಾಲಯಗಳ ಮೂಲಕ ಉದಾತ್ತೀಕರಣಗೊಳ್ಳುತ್ತದೆ. ಪ್ರತಿಮಾ ಆರಾಧನೆಯ ಮೂಲಕ ಸಾಮಾನ್ಯ ಜನರು ದೈವೀಕ ಪ್ರಜ್ಞೆ ಹೊಂದುತ್ತಾರೆ ಎಂದು ವಿವರಿಸಿದರು.
ಕಾರಂಜಿ ಮಠದ ಗುರುಸಿದ್ದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅರ್ಚಕರು ಪೂಜಾ ವಿಧಾನ, ವೇಷಭೂಷಣ ಹಾಗೂ ಮಂತ್ರೋಚ್ಚಾರಣೆಯಲ್ಲಿ ಶುದ್ಧತೆ ಮತ್ತು ಸ್ಪಷ್ಟತೆ ಕಾಪಾಡಿಕೊಳ್ಳಬೇಕು. ಮಂತ್ರೋಚ್ಚಾರಣೆಯಲ್ಲಿ ದೋಷಗಳು ಉಂಟಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಮುಖ್ಯ ವಕ್ತಾರ ಮನೋಹರ ಮಠಜಿ ಮಾತನಾಡಿ, ಅರ್ಚಕನು ದೇವರು ಮತ್ತು ಭಕ್ತರ ನಡುವಿನ ಕೊಂಡಿಯಾಗಿದ್ದು, ಶುದ್ಧ ಅಂತಃಕರಣ, ಪ್ರಾಮಾಣಿಕತೆ ಹಾಗೂ ಆದರ್ಶ ನಡೆ-ನುಡಿಗಳ ಮೂಲಕ ಸೇವೆ ಸಲ್ಲಿಸಿದಾಗ ಮಾತ್ರ ದೇವಾಲಯ, ಭಕ್ತರು ಹಾಗೂ ಸಮಾಜದ ಉನ್ನತಿಗೆ ಕಾರಣನಾಗುತ್ತಾನೆ ಎಂದು ತಿಳಿಸಿದರು.
ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಇದೇ ಪೂಜಾ ಪದ್ಧತಿ ಕೈಪಿಡಿ ಎಂಬ ಕಿರು ಕೃತಿ ಪೂಜ್ಯರಿಂದ ಲೋಕಾರ್ಪಣೆಗೊಳಿಸಲಾಯಿತು. ನಗರ ಸಂಘಚಾಲಕ ಬಾಳಣ್ಣ ಕಗ್ಗಣಗಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಪಿ.ಎಸ್.ಹಿರೇಮಠ, ವೈದ್ಯರಾದ ಡಾ.ಎಂ.ಬಿ.ಬೆಲ್ಲದ ಹಾಗೂ ಡಾ.ಕೇದಾರೇಶ್ವರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಬಸವರಾಜ ಬಾಗುಜಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಜಯ ಜಾದವ್ ಶಾಂತಿ ಮಂತ್ರ ಹಾಗೂ ಜಯಘೋಷ ನಡೆಸಿಕೊಟ್ಟರು. ಬಸವರಾಜ ಹಳಿಂಗಳಿ ವಂದಿಸಿದರು. ಆರಂಭದಲ್ಲಿ ಹಿರೇಮಠದ ಗುರುಕುಲದ ವಿದ್ಯಾರ್ಥಿಗಳು ಗಂಗಾರತಿ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕ ಚಾಲನೆ ನೀಡಿದರು.
ದಕ್ಷಿಣ ಕರ್ನಾಟಕದ ದೇವಾಲಯಗಳು ಸ್ವಚ್ಛತೆ ಹಾಗೂ ಕ್ರಮಬದ್ಧ ಪೂಜಾ ಆಚರಣೆಗಳಿಂದ ಜನಮನ್ನಣೆ ಗಳಿಸಿರುವಂತೆ ಉತ್ತರ ಕರ್ನಾಟಕದ ದೇವಾಲಯಗಳೂ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ.
-ಹನುಮಂತನಾಥ ಮಹಾಸ್ವಾಮೀಜಿ, ಜಗದ್ಗುರು, ಕುಂಚಿಟಿಗರ ಸಂಸ್ಥಾನ ಮಠ.
ಬೆಳಗಾವಿ ಜಿಲ್ಲೆಯ ವಿವಿಧ ಸಮುದಾಯಗಳ ಅರ್ಚಕರನ್ನು ಒಂದೇ ವೇದಿಕೆಗೆ ಕರೆತಂದು ತರಬೇತಿ ಶಿಬಿರ ಯಶಸ್ವಿಗೊಳಿಸಿರುವುದು ಶ್ಲಾಘನೀಯ.
-ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಹುಕ್ಕೇರಿ ಮಠ ಬೆಳಗಾವಿ.
ಭಕ್ತಿ, ಶ್ರದ್ಧೆ, ಘನತೆ ಹಾಗೂ ಗಾಂಭೀರ್ಯದಿಂದ ನಮ್ಮ ಉತ್ತರ ಕರ್ನಾಟಕದ ಸಕಲ ದೇಗುಲಗಳಲ್ಲಿ ಶಿಸ್ತು ಬದ್ಧ ಆಚರಣೆ ಹಾಗೂ ಪೂಜಾ ಕಾರ್ಯಗಳು ನಡೆಯಬೇಕು ಎಂಬ ಸದುದ್ದೇಶದಿಂದ ವಿವಿಧ ಸಮಾಜಗಳ ಅರ್ಚಕರನ್ನು ಒಂದೇ ವೇದಿಕೆಗೆ ಕರೆತಂದು ಈ ಸಂಸ್ಕಾರ ಶಿರಗಳನ್ನು ನಡೆಸುತ್ತಿರುವ ಕರ್ನಾಟಕ ದೇವಾಲಯಗಳ ಸಂವರ್ಧನ ಸಮಿತಿಯ ಈ ಪ್ರಯತ್ನ ಶ್ಲಾಘನೀಯ. ಅವರ ಈ ಪ್ರಯತ್ನಕ್ಕೆ ಶುಭವಾಗಲಿ.
-ಮಹಾಂತೇಶ ವಕ್ಕುಂದ, ಬೆಳಗಾವಿ.