ಎನ್. ಎಂ. ಡಿ. ಸಿ ಗಣಿ ಕಾರ್ಮಿಕರ ಪ್ರತಿಭಟನೆ

MK HasiruKranti
ಎನ್. ಎಂ. ಡಿ. ಸಿ ಗಣಿ ಕಾರ್ಮಿಕರ ಪ್ರತಿಭಟನೆ
WhatsApp Group Join Now
Telegram Group Join Now
ಬಳ್ಳಾರಿ, ಏ.18: ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕರ ಸಂಘದಿಂದ, ಎನ್. ಎಂ. ಡಿ. ಸಿ ಕುಮಾರಸ್ವಾಮಿ ಗಣಿಯ ಎಲ್ಲಾ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವಂತೆ ಆಗ್ರಹಿಸಿ, ಎನ್. ಎಂ. ಡಿ. ಸಿ ಆಡಳಿತ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಮನವಿ ಪತ್ರವನ್ನು ಡಿಜಿಎಂ (ಹೆಚ್. ಆರ್) ವೇಲು ವಸಂತನ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ *ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯಾಧ್ಯಕ್ಷರು, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ. ದೇವದಾಸ್* ಅವರು ಮಾತನಾಡುತ್ತಾ “ಎನ್. ಎಂ. ಡಿ. ಸಿ ಕುಮಾರ ಸ್ವಾಮಿ ಗಣಿಯಲ್ಲಿ ನೂರಾರು ಗುತ್ತಿಗೆ ಕಾರ್ಮಿಕರು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 31, 2026ಕ್ಕೆ ಕುಮಾರ ಸ್ವಾಮಿ ಗಣಿಯಲ್ಲಿನ ರಾಕಟೆಕ್ ಕಂಪನಿಯ ಗುತ್ತಿಗೆ ಅವಧಿ ಮುಗಿದಿದ್ದು, ವಿಘ್ನೇಶ್ ಇನ್ಫ್ರಾ ಪ್ರಾಜೆಕ್ಟ್ ಗೆ ಹೊಸದಾಗಿ ಟೆಂಡರ್ ನೀಡಲಾಗಿದೆ. 500ಕ್ಕೂ ಹೆಚ್ಚು ಕಾರ್ಮಿಕರು ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದು, ಇವರ ಮುಂದಿನ ಬದುಕು ಅತಂತ್ರದಲ್ಲಿದೆ. ಮೂಲ ಮಾಲೀಕರಾದ ಎನ್. ಎಂ. ಡಿ. ಸಿ ಹಾಗೂ ಹೊಸ ಕಾಂಟ್ರಾಕ್ಟ್ ವಿಘ್ನೇಶ್ ಕಂಪನಿ, ಎಲ್ಲಾ ಕಾರ್ಮಿಕರನ್ನು ಕೆಲಸ ಮುಂದುವರಿಸುವ ಕುರಿತು ಭರವಸೆ ನೀಡಿದ್ದರೂ, ಇಲ್ಲಿಯವರೆಗೂ ಯಾವುದೇ ಸ್ಪಷ್ಟ ಕ್ರಮ ತೆಗೆದುಕೊಂಡಿಲ್ಲ. ಈ ಹಿಂದೆ ಸಂಯುಕ್ತ ಗಣಿ ಕಾರ್ಮಿಕ ಸಂಘದಿಂದ ಎನ್. ಎಂ. ಡಿ. ಸಿ ಹಾಗೂ ವಿಘ್ನೇಶ್ ಕಂಪನಿಗೆ ಮನವಿ ಪತ್ರ ಕಳುಹಿಸಲಾಗಿದೆ, ಖುದ್ದಾಗಿ ಹೋಗಿ ಕೂಡ ಮನವಿ ನೀಡಲಾಗಿದೆ. ಆದರೂ ಸಮಸ್ಯೆ ಇತ್ಯರ್ಥಕ್ಕೆ ಇಲ್ಲಿವರೆಗೂ ಯಾವುದೇ ಚರ್ಚೆಗೂ ಆಹ್ವಾನಿಸಿಲ್ಲ. ಇದಲ್ಲದೆ ಈ ಹಿಂದೆ ಕೆಲಸದಲ್ಲಿ ಇರದ ಹೊಸಬರನ್ನ ತೆಗೆದುಕೊಳ್ಳುವ ಸುದ್ದಿ ಕೂಡ ಹರಿದಾಡುತ್ತಿದ್ದು, ಕಾರ್ಮಿಕರನ್ನು ಮತ್ತಷ್ಟು ಇದು ಆತಂಕಕ್ಕೆ ದೂಡಿದೆ. ಹಾಗಾಗಿ ಅನಿವಾರ್ಯವಾಗಿ ಈಗ ಪ್ರತಿಭಟನೆಗೆ ಮುಂದಾಗಬೇಕಿದೆ.”. ಎಂದರು.
ಈ ಹಿನ್ನಲೆಯಲ್ಲಿ, “ಈಗಾಗಲೇ ಕೆಲಸ ಮಾಡಿದ ಎಲ್ಲಾ ಕಾರ್ಮಿಕರನ್ನ ಮೊದಲ ಆಧ್ಯತೆ ಮೇರೆಗೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಒಂದು ವೇಳೆ ಇದು ಆಗದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಕಾರ್ಮಿಕರು ಸಜ್ಜಾಗಬೇಕೆಂದು” ಕರೆ ನೀಡಿದರು.
ಸಂಯುಕ್ತ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಪ್ರಮೋದ್. ಎನ್* ಮಾತನಾಡುತ್ತಾ “ಕಾರ್ಮಿಕರು ತಮ್ಮ ಶ್ರಮದಿಂದ ಎನ್. ಎಂ. ಡಿ. ಸಿ ಅಂತಹ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಕಾಂಟ್ರಾಕ್ಟ್ ಬದಲಾದರೂ ಎನ್. ಎಂ. ಡಿ. ಸಿ ಕೂಡ ನಿರಂತರವಾಗಿ ಇದೇ ಕಾರ್ಮಿಕರನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈಗಲೂ ಇದೇ ಪದ್ಧತಿಯನ್ನು ಎನ್. ಎಂ. ಡಿ. ಸಿ ಮುಂದುವರೆಸಬೇಕು. ಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಬೇಕಾದರೆ ಒಗ್ಗಟ್ಟು ಕಾಪಾಡಿಕೊಳ್ಳಬೇಕು ಹಾಗೂ ಹೋರಾಟ ಅನಿವಾರ್ಯ” ಎಂದು ಕರೆ ನೀಡಿದರು.
ಮನವಿ ಪತ್ರವನ್ನು ಸ್ವೀಕರಿಸಿದ ಡಿಜಿಎಂ (ಹೆಚ್. ಆರ್) ವೇಲು ವಸಂತನ್ ಅವರು ಎಲ್ಲರನ್ನೂ ಕೆಲಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ, ಏಪ್ರಿಲ್ 20ರಂದು ಎನ್. ಎಂ. ಡಿ. ಸಿ, ಕಾಂಟ್ರಾಕ್ಟ್ ಹಾಗೂ ಯುನಿಯನ್ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಿಗದಿಪಡಿಸುವುದಾಗಿ ತಿಳಿಸಿದರು. ಈ ಕೂಡಲೆ ರಾಕ್ ಟೆಕ್ ಕಂಪನಿ ಅಡಿಯಲ್ಲಿ ಕೆಲಸ ಮಾಡಿದ ಎಲ್ಲಾ 500 ಕಾರ್ಮಿಕರ ವಿವಿಧ ಮಾಹಿತಿಯೊಂದಿಗೆ ಪಟ್ಟಿ ನೀಡಲು ತಿಳಿಸಿದರು.
ಎಐಯುಟಿಯುಸಿ ಮುಖಂಡರಾದ ಸುರೇಶ್, ಕಿರಣ್ ಕುಮಾರ್, ಸಂಯುಕ್ತ ಗಣಿ ಕಾರ್ಮಿಕ ಸಂಘದ ಮುಖಂಡರಾದ ಅಂಬರೀಷ್, ಬಾಬು, ಕೃಷ್ಣಪ್ಪ, ತಿಮ್ಮಣ್ಣ, ಬಸವರಾಜ್, ಅಮೀನುದ್ದೀನ್, ಆಯೂಬ್, ಚಿದಾನಂದ, ಪರಶುರಾಮ, ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article