ಬೆಳಗಾವಿ: ಕುಟುಂಬದ ಜವಾಬ್ದಾರಿಗಳ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ರಾಷ್ಟ್ರಾಭಿಮಾನ ಮತ್ತು ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮಗಳನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ಆಯೋಜಿಸುತ್ತಿರುವ ಕ್ರಾಂತಿ ಮಹಿಳಾ ಮಂಡಳದ ಸೇವೆ ಶ್ಲಾಘನೀಯವಾಗಿದೆ ಎಂದು ಟ್ಯಾಕ್ಸ್ ಕನ್ಸಲ್ಟೆಂಟ್ ಜಿತೇಶ್ ಕಬ್ಬೂರ್ ಅಭಿಪ್ರಾಯಪಟ್ಟರು.
ನಗರದ ಆದರ್ಶನಗರ, ಹಿಂದವಾಡಿಯ ಐಎಂಇಆರ್ ಸಭಾಂಗಣದಲ್ಲಿ ಸೋಮವಾರ ಕ್ರಾಂತಿ ಮಹಿಳಾ ಮಂಡಳದ 20ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಗಾನ-ನಾಟ್ಯ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ "2006–2026ರ ಸಾಮಾಜಿಕ ಕಾರ್ಯಗಳ ಪಕ್ಷಿನೋಟ" ಕಿರುಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮಂಡಳವು ಸಮಾಜಮುಖಿ ಚಟುವಟಿಕೆಗಳನ್ನು ಇದೇ ಉತ್ಸಾಹದಿಂದ ಮುಂದುವರಿಸಿಕೊಂಡು ಹೋಗಿ ಶೀಘ್ರದಲ್ಲೇ ತನ್ನ ಬೆಳ್ಳಿ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳದ ಅಧ್ಯಕ್ಷೆ ಮಂಗಲಾ ಮಠ ಅವರು ಎಲ್ಲರನ್ನು ಸ್ವಾಗತಿಸಿದರು. ಉಪಾಧ್ಯಕ್ಷೆ ತ್ರಿಶಿಲಾ ಪಾಯಪ್ಪನವರ ಮಂಡಳದ ಸಾಮಾಜಿಕ ಕಾರ್ಯಗಳ ಕುರಿತು ವಿವರಿಸಿದರು. ಕಾರ್ಯದರ್ಶಿ ಭಾರತಿ ರತ್ನಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸದಸ್ಯೆಯರಾದ ಪ್ರೇಮಾ ಉಪಾಧ್ಯಾಯ, ಉಮಾ ಹಾಗೂ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿನಿಯರು ಮತ್ತು ಪುಟಾಣಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಸಾಬಣ್ಣವರ ಮತ್ತು ಕ್ಯಾಸಿಯೋದಲ್ಲಿ ಅಶೋಕ ಕಟ್ಟಿ ಸಂಗೀತ ಸಹಕಾರ ನೀಡಿದರು. ಮಂಡಳದ ಸದಸ್ಯೆಯರಾದ ವಾಣಿ ಹೇರೇಕರ್ ಮತ್ತು ರೇಷ್ಮಾ ದಿವಟ್ಟೆ ನೃತ್ಯ ಪ್ರದರ್ಶಿಸಿದರು. ತ್ರಿಶಿಲಾ ಪಾಯಪ್ಪನವರ ಅತಿಥಿಗಳನ್ನು ಪರಿಚಯಿಸಿದರು. ಮಮತಾ ಆಂಟಿನ, ರತ್ನಶ್ರೀ ಗುಡೆರ, ಅಕ್ಷತಾ ಪಾಟೀಲ್ ಹಾಗೂ ದೀಪ್ತಿ ಕಾಗವಾಡ ನಿರೂಪಿಸಿದರು. ಗೀತಾ ಯಮ್ಮಿ ವಂದಿಸಿದರು.