ಬಳ್ಳಾರಿ,ಜು.21: ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲೇ ಮಹಿಳಾ ಮೀಸಲಾತಿಯನ್ನು ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಯಿಂದ ಬೇರ್ಪಡಿಸಿ, ಯಾವುದೇ ಪೂರ್ವ ಷರತ್ತಿಲ್ಲದೆ ೩೩ ಶೇಕಡಾ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಆಗ್ರಹಿಸಿದೆ.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಎಂಎಸ್ ರಾಜ್ಯಾಧ್ಯಕ್ಷೆ ಜೆ. ಚಂದ್ರಕುಮಾರಿ, ರಾಷ್ಟ್ರೀಯ ಮಹಿಳಾ ಮೀಸಲಾತಿ ಒಕ್ಕೂಟ (ಓಅWಖ) ನೇತೃತ್ವದಲ್ಲಿ ದೇಶದ ವಿವಿಧ ಮಹಿಳಾ ಸಂಘಟನೆಗಳು ಈ ಬೇಡಿಕೆಯನ್ನು ಮುಂದಿಟ್ಟಿದ್ದು, ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಸಮಾನ ಅವಕಾಶ ಕಲ್ಪಿಸಲು ಯಾವುದೇ ಷರತ್ತಿಲ್ಲದೆ ಮೀಸಲಾತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಭಾರತವು ಮಹಿಳೆಯರ ಸಂಸತ್ ಪ್ರಾತಿನಿಧ್ಯದ ವಿಷಯದಲ್ಲಿ ವಿಶ್ವದ ೧೮೫ ರಾಷ್ಟ್ರಗಳ ಪೈಕಿ ೧೫೧ನೇ ಸ್ಥಾನದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ. ಹಲವು ದಶಕಗಳಿಂದ ಮಹಿಳೆಯರಿಗೆ ರಾಜಕೀಯದಲ್ಲಿ ನ್ಯಾಯಸಮ್ಮತ ಅವಕಾಶ ದೊರೆಯದೆ ಐತಿಹಾಸಿಕ ಅನ್ಯಾಯ ಮುಂದುವರಿದಿದೆ ಎಂದು ಅವರು ಹೇಳಿದರು.
೨೦೨೩ರಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಅಂಗೀಕಾರವಾಗಿದ್ದರೂ, ಅದರ ಜಾರಿಯನ್ನು ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆ ಪೂರ್ಣಗೊಳ್ಳುವವರೆಗೆ ಮುಂದೂಡಲಾಗಿದೆ. ಈ ಷರತ್ತನ್ನು ಕೈಬಿಟ್ಟು, ಈಗಿರುವ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಆಧಾರದ ಮೇಲೆಯೇ ಮುಂದಿನ ಚುನಾವಣೆಯಿಂದಲೇ ೩೩ ಶೇಕಡಾ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಮಹಿಳಾ ಮೀಸಲಾತಿಯನ್ನು ರಾಜಕೀಯ ಅಜೆಂಡಾಗಳೊAದಿಗೆ ಜೋಡಿಸದೆ, ಮಹಿಳೆಯರ ಸಂವಿಧಾನಬದ್ಧ ಹಕ್ಕು ಎಂದು ಪರಿಗಣಿಸಿ ತಕ್ಷಣ ಅನುಷ್ಠಾನಗೊಳಿಸಬೇಕು. ಮಹಿಳೆಯರ ರಾಜಕೀಯ ಸಬಲೀಕರಣವನ್ನು ಮತ್ತಷ್ಟು ವಿಳಂಬಗೊಳಿಸುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಜೆಎಂಎಸ್ ಜಿಲ್ಲಾ ಸಮಿತಿ ಸದಸ್ಯರಾದ ಎ. ಮಲ್ಲಮ್ಮ ಹಾಗೂ ಅರುಣಾ ಉಪಸ್ಥಿತರಿದ್ದರು.