ಬಳ್ಳಾರಿ, ಜು.21: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಎಲ್ಲ ಮತದಾರರು ಸಕ್ರಿಯರಾಗಿ ಪಾಲ್ಗೊಳ್ಳಬೇಕೆಂದು ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ಎಂ.ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಮಾರ್ಗದರ್ಶನದಲ್ಲಿ ತೆರೆಯಲಾಗಿರುವ ಎಸ್ಐಆರ್ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ಸ್ವಯಂ ಸೇವಕರಿಂದ ಮಾಹಿತಿ ಪಡೆದ ನಂತರ ಈ ಕುರಿತು ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಮತದಾನದ ಹಕ್ಕು ಸಾಂವಿಧಾನಿಕ ಹಕ್ಕಾಗಿದ್ದು ಎಸ್ಐಆರ್ ಸಮೀಕ್ಷೆಯಲ್ಲಿ ನಾಗರಿಕರೆಲ್ಲರೂ ಭಾಗವಹಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ.
ಚುನಾವಣಾ ಆಯೋಗದ ವತಿಯಿಂದ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ನಾಗರಿಕರು ಸಹಕರಿಸಬೇಕು, ಎನುಮರೇಶನ್ ಫಾರಂಗಳನ್ನು ಪಡೆದು ಸರಿಯಾದ ಮಾಹಿತಿ ತುಂಬಿ ಅಥವಾ ತುಂಬಿಸಿ ಬಿಎಲ್ಓ ಅವರಿಗೆ ನೀಡಬೇಕು ಎಂದು ಹೇಳಿರುವ ಅವರು, ಯಾವುದೇ ನಾಗರಿಕರು ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಹೇಳಿದ್ದಾರೆ.
ನಗರದ ರಾಘವೇಂದ್ರ ಟಾಕೀಸನ ಕಟ್ಟಡದಲ್ಲಿ ನಗರ ಶಾಸಕರು ಚುನಾವಣಾ ಆಯೋಗದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸಹಾಯ ಕೇಂದ್ರ ಆರಂಭಿಸಿದ್ದಾರೆ, ಎನುಮರೇಶನ್ ಫಾರಂ ಭರ್ತಿ ಸಬಂಧ ಅಗತ್ಯ ಸಹಾಯ ಬೇಕಾದ ನಾಗರಿಕರು ಇಲ್ಲಿಗೆ ಭೇಟಿ ನೀಡಬಹುದು, ಸಹಾಯ ಕೇಂದ್ರ ಅತ್ಯುತ್ತಮವಾಗಿ ಕಾರ್ಯ ನಿರವಹಿಸುತ್ತಿದೆ ಎಂದು ಪ್ರಶಂಸಿಸಿದ್ದಾರೆ.
ಈ ಸಂದರ್ಭ ಕಂಟ್ರೋಲ್ ರೂಮ್ನ ಉಸ್ತುವಾರಿ ಗೌತಮ್ ಎಸ್ ಅವರಿಂದ ಕಂಟ್ರೋಲ್ ರೂಮ್ನ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದರು.
ಯರಗುಡಿ ಸೋಮಣ್ಣ, ಸುಬ್ಬರಾಯುಡು ಮತ್ತಿತರರು ಹಾಜರಿದ್ದರು.