ಮಹಾಲಿಂಗಪುರ : ಮಾದಕ ವ್ಯಸನ ಬದುಕಿಗೆ ಮಾರಕ, ನಿರ್ವ್ಯಸನ ಆರೋಗ್ಯಕ್ಕೆ ಪೂರಕ ಎಂದು ಠಾಣಾಧಿಕಾರಿ ಕಿರಣ ಸತ್ತಿಗೇರಿ ಹೇಳಿದರು. ಸ್ಥಳೀಯ ಕೆಎಲ್ಇ ಪದವಿ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಕ್ಯಾಂಪಸ್ನಲ್ಲಿ ದುರ್ವ್ಯಸನದ ಬಗ್ಗೆ ಯಾವುದೇ ಚಟುವಟಿಕೆ ಕಂಡುಬಂದರೂ ಪೊಲೀಸ್ ಇಲಾಖೆಗೆ ಸಂದೇಶ ನೀಡುವ ಮಾಹಿತಿದಾರ ನಿಮ್ಮೊಳಗೇ ಒಬ್ಬನಿರುತ್ತಾನೆ. ಆದ್ದರಿಂದ ಮಕ್ಕಳು ಹುಷಾರಾಗಿ ದಾರಿ ತಪ್ಪದ ನಡವಳಿಕೆಯಿಂದ ಇರಬೇಕು ಎಂದರು. ಕ್ಯಾಂಪಸ್ ನಲ್ಲಾಗಲೀ ಸಾರ್ವಜನಿಕ ಸ್ಥಳದಲ್ಲಾಗಲೀ ಮಾದಕವಸ್ತು ಬಗ್ಗೆ ಯಾವುದೇ ಮಾಹಿತಿಯನ್ನು ಠಾಣೆಗೆ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು, ಕ್ರಮ ಜರುಗಿಸುತ್ತೇವೆ ಎಂದರು.
ಮಾದಕ ವ್ಯಸನದ ಬಗ್ಗೆಮಾಹಿ ನೀಡುವ ಕ್ಯೂಆರ್ ಕೋಡ್ ಇರುವ ಚಾರ್ಟನ್ನು ಠಾಣಾಧಿಕಾರಿ ಪ್ರಾಚಾರ್ಯರಿಗೆ ಒಪ್ಪಿಸಿದರು.
ಪ್ರಾಚಾರ್ಯ ಎನ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಶಿಷ್ಟಾಚಾರ, ಸಾತ್ವಿಕ ಆಹಾರ, ಒಳ್ಳೆಯ ವಿಚಾರ ರೂಢಿಸಿಕೊಳ್ಳಬೇಕು. ಯಾವುದೇ ಮಾದಕ ವಸ್ತುಗಳ ವ್ಯಸನಿಕರಾಗಬಾರದು ಎಂದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಪಿಯು ಪ್ರಾಚಾರ್ಯ ಎಲ್.ಬಿ.ತುಪ್ಪದ, ಪ್ರಶಾಂತ ಗೌಳಿ, ಐ.ಸಿ.ಶಿರೋಳ, ಎಸ್.ಎಸ್.ಮುಗಳ್ಯಾಳ ಇದ್ದರು.
