ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ವಿವಿಧ ಕಡೆಗಳಲ್ಲಿ ಇರುವ ಗಾವಠಾಣ ಜಾಗವನ್ನು ಕೆಲವೊಂದು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಆಕ್ರಮಿಸಿಕೊಂಡಿದ್ದು ಅದನ್ನು ತಕ್ಷಣ ತೆರವು ಗೊಳಿಸಬೇಕೆಂದು ಅಗ್ರಹಿಸಿ ಸಾರ್ವಜನಿಕರು ಮಂಗಳವಾರದಂದು ಗ್ರಾಮದ ಕುರಿದಡ್ಡಿ ಹತ್ತಿರ ಧರಣಿ ನಡೆಸಿದರು,
ಯುವ ಮುಖಂಡರಾದ ದುರ್ಗಪ್ಪ ಮೇತ್ರಿ, ಶಿವಲಿಂಗ ಹೊಸ್ತೋಟ, ಲಕ್ಷ್ಮಣ ಖಾನಟ್ಟಿ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅನೇಕ ಹೋರಾಟಗಾರರು ಮಾತನಾಡಿ ಗಾವಠಾಣ ಜಾಗದಲ್ಲಿ ಪಶು ಆಸ್ಪತ್ರೆ, ಆಸ್ಪತ್ರೆ, ಶೌಚಾಲಯ ನಿರ್ಮಾಣ ಮತ್ತು ಸಮುದಾಯ ಭವನದಂತಹ ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕೆಲಸಕ್ಕೆ ಮಿಸಲಿದ್ದು ಅಂತಹ ಗಾವಠಾಣ ಜಾಗದಲ್ಲಿ ನಿರ್ಮಿಸುತ್ತಿರುವ ಖಾಸಗಿ ಕಟ್ಟಡವನ್ನು ತಕ್ಷಣವೇ ನಿಲ್ಲಿಸಿ ಅದನ್ನು ಕೂಡಲೇ ತೆರವು ಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ದೇವೇಂದ್ರ ನೇರಲೇಕರ, ಸಹಾಯಕ ನಿರ್ದೇಶಕರು ಎಸ್.ಎಸ್ ರೋಡ್ಡನವರ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಎಲ್.ಬಬಲಿ ಮಾತನಾಡಿ ಒಂದು ತಿಂಗಳ ಕಾಲಾವಕಾಶದಲ್ಲಿ ಗ್ರಾಮದ ಎಲ್ಲ ಗಾವಠಾಣ ಜಾಗದ ಸಂಪೂರ್ಣ ಸರ್ವೆ ಮಾಡಿಸಿ ಅದನ್ನು ಆಕ್ರಮಿಸಿ ಕೊಂಡವರಿಂದ ತೆರವುಗೊಳಿಸುವ ವಿಶ್ವಾಸ ನೀಡಿದರು.
ನಂತರ ಹೋರಾಟಗಾರರು ಮಾತನಾಡಿ ಒಂದು ತಿಂಗಳಲ್ಲಿ ತೆರವುಗೊಳಿಸದಿದ್ದರೆ ತಾಲೂಕು ಪಂಚಾಯತ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿ ಪ್ರತಿಭಟನೆ ಕೈ ಬಿಟ್ಟರು. ಪ್ರತಿಭಟನೆಯಲ್ಲಿ ಮುತ್ತಪ್ಪ ಡವಳೇಶ್ವರ, ಪ್ರಕಾಶ್ ಪಾಟೀಲ, ನಾಗಪ್ಪ ಚಿಂಚಲಿ, ಬಸು ಅಂದಾನಿ, ದುಂಡಪ್ಪ ಬೆಳಗಲಿ, ಮಲ್ಲಪ್ಪ ಕುಂದರಗಿ ಸೇರಿದಂತೆ ಗ್ರಾಮದ ಸಾರ್ವಜನಿಕರು ಭಾಗಿಯಾಗಿದ್ದರು.
