ಜಮಖಂಡಿ,ಎ,೧೫ : ಎಲೆ ಮರೆ ಕಾಯಿಯಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಶಿಕ್ಷಕರನ್ನು ಹುಡುಕಿ ಸತತ ೨೬ ವರ್ಷಗಳಿಂದ ಶಿಕ್ಷಕರಿಗೆ ಪ್ರಶಸ್ತಿ ನೀಡುತ್ತಿರುವ ಮಧುರಖಂಡಿಯ ಗವಿಮಠ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ವಿಜಯಪೂರ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಅಭಿಪ್ರಾಯ ಪಟ್ಟರು.
ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗವಿಮಠ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿಷತ್ತು ಜಮಖಂಡಿ, ಹುನಗುಂದ, ಇಲಕಲ್ ವತಿಯಿಂದ ಲಿಂ. ಕೊಟ್ರಯ್ಯ ಗವಿಮಠ, ಲಿಂ. ಪಂಪಾವತಿ ಗವಿಮಠ ಅವರ ಹೆಸರಿನಲ್ಲಿ ದತ್ತಿನಿಧಿ ಉಪನ್ಯಾಸ, ಶಿಕ್ಷಕ-ಶಿಕ್ಷಕಿಯರಿಗೆ ಪ್ರಶಸ್ತಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನೂ ಗವಿಮಠ ಪರಿವಾರದ ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಳೆದಿದ್ದು, ಕೆ.ಎ.ಎಸ್. ಪರೀಕ್ಷೆ ಪಾಸಾಗಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಾಧನೆಗೆ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳಿದರು.
ದತ್ತಿನಿಧಿ ಉಪನ್ಯಾಸಕರಾಗಿ ಆಗಮಿಸಿದ್ದ ವಿಜಯಪೂರದ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಓದು-ಬರಹ ಬಾರದ ಜನಪದರು ತಮ್ಮ ಸಾಹಿತ್ಯದ ಮೂಲಕ ಬದುಕಿನ ಮೌಲ್ಯಗಳನ್ನು ಬಿತ್ತಿದ್ದರು. ಆದರೆ ಇಂದು ಸಮಾಜದ ವಿವಿಧ ಕ್ಷೇತ್ರದ ಕೆಲವು ಪ್ರಖ್ಯಾತರು ಹಣಕ್ಕಾಗಿ ಮೌಲ್ಯಗಳನ್ನು ನಾಶ ಮಾಡುತ್ತಿರುವುದು ಖೇದದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವಾನಂದ ಶೇಲ್ಲಿಕೇರಿ ಮಾತನಾಡಿ, ಹೆತ್ತ ವೃದ್ಧ ತಂದೆ-ತಾಯಿಗಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿರುವ ಇಂದಿನ ಕಾಲದಲ್ಲಿ ಕಳೆದ ೨೬ ವರ್ಷಗಳಿಂದ ತಂದೆ-ತಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಮುಂದಿನ ಪೀಳಿಗೆಗೆ ಗವಿಮಠ ಸಹೋದರರು ಸ್ಪೂರ್ತಿಯಾಗಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ಹುನಗುಂದ ನಿವೃತ್ತ ಶಿಕ್ಷಕ ಶ್ಯಾಮ ಕುಲಕರ್ಣಿ ಶಿಕ್ಷಕರಿಗಾಗಿ ಕಡಿಮೆ ಖರ್ಚಿನ ವಿಜ್ಞಾನ ಪ್ರಯೋಗಗಳು ಹಾಗೂ ವಿಶೇಷ ಗೋಂಬೆ ಪ್ರದರ್ಶನವನ್ನು ನೀಡಿ, ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಮನರಂಜನೆಯ ಮೂಲಕ ತಿಳಿಸಿದಾಗ ಮಕ್ಕಳಲ್ಲಿ ಆಸಕ್ತಿ ಬೆಳೆಯುವದರೊಂದಿಗೆ ಕಲಿಕೆ ಗಟ್ಟೀಕರಣಗೊಳ್ಳುತ್ತದೆ ಎಂದರು.


