ಬಳ್ಳಾರಿ, ಏ.18.: ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ ಏ.15ರಂದು ಎಪಿಎಂಸಿ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 65/2026ರಡಿ ಬಿ.ಎನ್.ಎಸ್–2023ರ ವಿವಿಧ ಕಲಂಗಳ ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಕುಮಾರ್ ಹೆಚ್.ವಿ (33), ಕೆಐಎಡಿಬಿ ಕಚೇರಿಯಲ್ಲಿ ಲಿಟರೇಟ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಠಾಣೆಯಲ್ಲಿ ಇರಿಸಲಾಗಿತ್ತು.
ಆದರೆ ಏ.16ರಂದು ಬೆಳಗಿನ ಜಾವ 2.30ರಿಂದ 3.10ರ ನಡುವೆ ಆರೋಪಿಯು ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಈ ಸಂಬಂಧ ಎಪಿಎಂಸಿ ಠಾಣೆಯಲ್ಲಿ ಮತ್ತೊಂದು ಪ್ರಕರಣ (ಗುನ್ನೆ ಸಂಖ್ಯೆ 89/2026) ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.
ಆರೋಪಿಯನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಡಿ.ಎಸ್.ಪಿ ವಿ. ಗೋವಿಂದರಾಜು ಅವರ ನೇತೃತ್ವದಲ್ಲಿ ಬಳ್ಳಾರಿ ನಗರ ಹಾಗೂ ಗ್ರಾಮೀಣ ಉಪವಿಭಾಗಗಳ ಪೊಲೀಸ್ ಸಿಬ್ಬಂದಿಯಿಂದ ಐದು ವಿಶೇಷ ತಂಡಗಳನ್ನು ರಚಿಸಲಾಯಿತು. ತಂತ್ರಜ್ಞಾನದ ಸಹಾಯದಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು ಏ.17ರಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಪರಾರಿಯಾದ ನಂತರ ಆರೋಪಿಗೆ ಮೊಬೈಲ್ ಸಹಾಯವನ್ನು ಮೊಹಮ್ಮದ್ ಸಾಹಿಲ್ ನೀಡಿದ್ದು, ರತ್ನಮ್ಮ ಹಣ ಹಾಗೂ ಬೈಕ್ ಒದಗಿಸಿದ್ದಾಳೆ. ಕೆ.ಟಿ. ಮಂಜುನಾಥ ಮತ್ತು ಕೆ.ಟಿ. ಚೇತನ್ ಮಾರ್ಗದರ್ಶನ ನೀಡಿದ್ದು, ಸೈಯ್ಯದ್ ಬೀಬೀ ಆಯಿಷಾ ಮತ್ತು ಮೊಹಮ್ಮದ್ ಅವೇಜ್ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಚಿತ್ತರಂಜನ್ ಓಬಣ್ಣ ಕಾರು ಒದಗಿಸಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಆರೋಪಿಗೆ ಸಹಾಯ ಮಾಡಿದ ಎಲ್ಲರ ವಿರುದ್ಧವೂ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ಸೆಕರ್ ತಿಳಿಸಿದ್ದಾರೆ.


