ಕೊಪ್ಪಳ: ನಗರಸಭೆ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಡೆಸುತ್ತಿರುವ 'ಬಲ್ಡೋಟ ತೊಲಗಿಸಿ, ಕೊಪ್ಪಳ ಉಳಿಸಿ' ಹೋರಾಟದ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ 'ಹಿರೇಬಗನಾಳ, ಅಲ್ಲಾನಗರ, ಹಾಲವರ್ತಿ, ಕಾಸನಕಂಡಿ, ಕುಣಿಕೇರಿ, ಚಿಕ್ಕಬಗನಾಳ ಸುತ್ತಲಿನ 14 ಸ್ಪಾಂಜ್ ಐರನ್ ಕಾರ್ಖಾನೆಗಳ ಮೇಲೆ ಮುಚ್ಚುವ ಕ್ರಮ ಜಾರಿಯಲ್ಲಿ ವಿಳಂಬವೇಕೆ' ಎಂದು ಪ್ರಶ್ನಿಸಿದರು.
ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕ ಬಂದ್ ಮಾಡಬೇಕು. ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಬೇಕು. ಕೇಂದ್ರ ಪರಿಸರ ಇಲಾಖೆಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಕಾರ್ಖಾನೆಗಳ ಸ್ಥಳಾಂತರವಾಗಬೇಕು. ಏಮ್ಸ್ ಸಂಸ್ಥೆಯಿಂದ ಆರೋಗ್ಯ ಸರ್ವೆ ಮತ್ತು ಐಐಎಸ್ಸಿ ಸಂಸ್ಥೆಯಿಂದ ಪರಿಸರ ಹಾನಿ ಸರ್ವೆ ನಡೆಸಬೇಕು. ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಹೋರಾಟ ಮುಂದುವರೆಯುತ್ತಿದೆ.
ಶಾಂತಯ್ಯ ಮಾತು ಮುಂದುವರೆಸಿ 'ಮೂರು ದಶಕಗಳಲ್ಲಿ 22 ಹಳ್ಳಿಗಳ ಜನ ತಮ್ಮ ಸರ್ವಸ್ವವನ್ನು ಕಳೆದುಕೊಂಡಿದ್ದಾರೆ. ಈಗ ಕೊನೆಯದಾಗಿ ಅವರ ಜೀವಕ್ಕೆ ಕುತ್ತು ಬಂದಿದೆ. ಇದುವರೆಗಿನ ಮೂರು ದವಕದಲ್ಲಿ ಸುಧಾರಿಸಿದ ತಂತ್ರಜ್ಞಾನ ಅಳವಡಿಸಿಕೊಳ್ಳದ ಕಾರ್ಖಾನೆಗಳು ಇನ್ನು ಮುಂದೆ ಅಳವಡಿಸಿಕೊಳ್ಳಲು ಹೇಗೆ ಸಾಧ್ಯ.
ಕಣ್ಣೊರೆಸುವ ತಂತ್ರ ಅನುಸರಿಸುವ ಪರಿಸರ ಇಲಾಖೆಯನ್ನು ಇನ್ನು ಮುಂದೆ ರೈತರು ಸರಳವಾಗಿ ಬಿಡಲಾರರು. ಗುತ್ತೇದಾರರ ಬೆದರಿಕೆಗಳು ಬಾಧಿತ ರೈತರಿಗೆ ಬರುತ್ತಿದ್ದು ಅವರು ಎಲ್ಲವನ್ನು ಎದುರಿಸಲು ಸಿದ್ಧರಾದರೆ ಅವರ ಬೆಂಬಲಕ್ಕೆ ಈ ಹೋರಾಟ ಯಾವತ್ತೂ ನಿಲ್ಲುತ್ತದೆ ಎಂದರು. 14 ಕಾರ್ಖಾನೆಗಳ ಪೈಕಿ ಕೇವಲ ಎರಡಕ್ಕೆ ಮೂಚ್ಚುವ ಪ್ರಕ್ರಿಯೆ ಆರಂಭ ಮಾಡಿ ಈಗ ಇನ್ನೂ ಮೂರು ಕಾರ್ಖಾನೆಗಳ ಮುಚ್ಚುವಿಕೆಯ ಕ್ರಮ ಯಾಕೆ ಜರುಗಿಸುತ್ತಿಲ್ಲ. ಒಂಬತ್ತು ಕಾರ್ಖಾನೆಗಳ ಮೇಲಿನ ಎನ್.ಪಿ.ಡಿ ಆದ ಮೇಲೆ ಮುಚ್ಚುವ ಆದೇಶ ಯಾಕೆ ಮಾಡುತ್ತಿಲ್ಲ. ಇನ್ನು ಮುಂದೆ ಕಾರ್ಖಾನೆಗಳ ಅಟ್ಟಹಾಸ ನಡೆಯದು. ಎಲ್ಲಿಯವರೆಗೆ ಗ್ರಾಮಗಳ ಜನರು ಸಹಿಸಿಕೊಂಡಿರಲು ಸಾಧ್ಯ. ಶೀಘ್ರ ಮುಚ್ಚುವ ಕ್ರಮ ಜರುಗಿಸದಿದ್ದಲ್ಲಿ ಪರಿಸರ ಇಲಾಖೆಗೆ ಬೀಗ ಹಾಕುವ ಹೋರಾಟ ಮಾಡೋಣ ಎಂದರು.
ಧರಣಿಯಲ್ಲಿ ಪ್ರಕಾಶಕ ಡಿ.ಎಂ.ಬಡಿಗೇರ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ರಾಜ್ಯ ರೈತ ಸಂಘದ ಮುಖಂಡ ಭೀಮಸೇನ ಕಲಕೇರಿ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಭಾವಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ತಿಮ್ಮಣ್ಮ ಕಲಕೇರಿ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಗವಿಸಿದ್ದಪ್ಪ ಮಾಲಿಪಾಟೀಲ, ದೊಡ್ಡ ಹನುಮಂತ ಕಲಿಕೇರಿ, ಎಚ್.ಡಿ. ಹೊಂಬಳ, ಶೌಕತ್ ಅಲಿ ನಾಗನೂರು, ನಾಗಪ್ಪ ಕಿನ್ನಾಳ, ಪಂಪಣ್ಣ, ಗವಿಸಿದ್ದಪ್ಪ ಚಿಕೇನಕೊಪ್ಪ, ರತ್ನಮ್ಮ ಮುಂತಾದವರು ಪಾಲ್ಗೊಂಡರು.
